ಬೆಳ್ತಂಗಡಿ ಧರ್ಮಪ್ರಾಂತ್ಯದ ಸಮಾಜ ಸೇವಾ ಸಂಸ್ಥೆ ಡಿಕೆಆರ್ಡಿಎಸ್ ಇದರ ವತಿಯಿಂದ ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದ ಸಹಯೋಗದೊಂದಿಗೆ, ಬೆಳ್ತಂಗಡಿ ತಾಲೂಕಿನ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಮುಂಚೂಣಿಯಾಗಿ ತೊಡಗಿಸಿಕೊಂಡಿರುವ ಸರಕಾರಿ ಇಲಾಖೆಗಳಿಗೆ ಹಾಗೂ ಪತ್ರಕರ್ತರಿಗೆ ಮೆಡಿಕಲ್ ಕಿಟ್ ಹಾಗೂ ಎನ್ 95 ಮಾಸ್ಕ್ಗಳ ವಿತರಣೆ ಕಾರ್ಯಕ್ರಮ ಮಂಗಳವಾರ ಬೆಳ್ತಂಗಡಿ ಬಿಷಪ್ ಹೌಸ್ನಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ, ಕೋವಿಡ್ ಎರಡನ ಅಲೆ ಸ್ಪೋಟಗೊಂಡು ಈ ಆಘಾತದಿಂದ ಜನ ನೆಲೆಯಿಲ್ಲದೆ ಓಡಾಡುತ್ತಿರುವಾಗ ನಾವೆಲ್ಲ ಅವರಿಗೆ ನೆರವಿನ ಮೂಲಕ ಕೈಜೋಡಿಸಬೇಕು. ಶಾಸಕ ಹರೀಶ್ ಪೂಂಜ ಅವರು ಗ್ರಾಮ ಗ್ರಾಮಗಳಲ್ಲಿ ತಂಡೋಪತಂಡವಾಗಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಅವರ ಜೊತೆ ಧರ್ಮಪ್ರಾಂತ್ಯವೂ ಕೈಜೋಡಿಸುತ್ತಿದೆ. ಕೋವಿಡ್ ನಿಯಂತ್ರಣಕ್ಕಾಗಿ ಆರೋಗ್ಯ ಕಾರ್ಯಕರ್ತರು ಮಾಡುತ್ತಿರುವ ಸೇವೆ ಶ್ಲಾಘನೀಯವಾದುದು.
ಇದು ಸರಕಾರ ಮಟ್ಟದ ಕೆಲಸವಾದರೂ ಫ್ರಂಟ್ ಲೈನ್ ಕಾರ್ಯಕರ್ತರು ಮಾಡುತ್ತಿರುವ ಸೇವೆಗೆ ನಾವು ಗೌರವ ನೀಡುತ್ತಿದ್ದೇವೆ. ಆದ್ದರಿಂದ ನಿಮ್ಮ ರಕ್ಷಣೆ ದೃಷ್ಟಿಯಿಂದ ನಾವು ನಿಮಗೆ ಈ ಮೂಲಕ ಆರೋಗ್ಯ ರಕ್ಷೆ ನೀಡುತ್ತಿದ್ದೇವೆ ಎಂದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸರಕಾರಿ ನೌಕರ ಬಂಧುಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಧರ್ಮಾಧ್ಯಕ್ಷರ ವತಿಯಿಂದ ಆರೋಗ್ಯ ಕಿಟ್ ವಿತರಿಸಿರುವುದು ಅಭಿನಂದನೀಯ.
ರೋಗ ನಿಯಂತ್ರಿಸುವ ನಿಟ್ಟಿನಲ್ಲಿ ಸಲಹೆಗಾಗಿ ಈ ಹಿಂದೆ ಬಿಷಪ್ ಅವರನ್ನು ಭೇಟಿಯಾಗಿದ್ದ ವೇಳೆ ಅವರು ಧರ್ಮಪ್ರಾಂತ್ಯದಿಂದ ಕೈಗೊಂಡ ಕಾರ್ಯಯೋಜನೆಗಳನ್ನು ವಿವರಿಸಿದ್ದರು. ಅದೇ ರೀತಿ ಧರ್ಮಪ್ರಾಂತ್ಯ ಮತ್ತು ಮಾನವ ಸ್ಪಂದನ ತಂಡದವರು ತಾಲೂಕಿನ ಎಲ್ಲೆಡೆ ಮೆಚ್ಚುಗಾರ್ಹ ರೀತಿಯಲ್ಲಿ ಸೇವೆ ಒದಗಿಸುತ್ತಿರುವುದು ಮಾದರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು, ತಾ.ಪಂ. ಇಒ ಕುಸುಮಾಧರ್ ಬಿ. ಮಾನವ ಸ್ಪಂದನ ತಂಡದ ಚೇರ್ಮೆನ್ ಪಿ.ಸಿ ಸೆಬಾಸ್ಟಿಯನ್,ತಾ.ಪತ್ರಕರ್ತರ ಸಂಘದ ಅಧ್ಯಕ್ಷ ಅಚುಶ್ರೀ ಬಾಂಗೇರು, ಮೀಡಿಯಾ ಕ್ಲಬ್ ಕಾರ್ಯದರ್ಶಿ ಉಮೇಶ್ ಕುಲಾಲ್, ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ಲಾಯಿಲ, ತಾ. ಆರೋಗ್ಯಾಧಿಕಾರಿ ಕಚೇರಿ ವಿಷಯ ನಿರ್ವಾಹಕ ಅಜಯ್ ಕಲ್ಲೆಗ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸಿಸ್ಟರ್, ಪ.ಪಂಚಾಯತ್ ನ ಮೆಟಿಲ್ಡಾ, ತಾ.ಪಂ ಪ್ರಭಾರ ವ್ಯವಸ್ಥಾಪಕ ಗಣೇಶ್ ಪೂಜಾರಿ ಉಪಸ್ಥಿತರಿದ್ದರು.
ಕೆಎಸ್ಎಮ್ಸಿಎ ನಿರ್ದೇಶಕ ಫಾ. ಷಾಜಿ ಮ್ಯಾಥ್ಯೂ ಪ್ರಸ್ತಾವನೆಗೈದು ಸ್ವಾಗತಿಸಿದರು. ಡಿಕೆಆರ್ಡಿಎಸ್ ನಿರ್ದೇಶಕ ಫಾ.ಬಿನೊಯ್ ಎ.ಜೆ ಕಾರ್ಯಕ್ರಮ ನಿರೂಪಿಸಿದರು. ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದ ಕೇಪ್ಟನ್ ಅಶ್ರಫ್ ಆಲಿಕುಂಞಿ ಆರೋಗ್ಯ ಕಿಟ್ ವಿವರ ನೀಡಿ ವಂದನಾರ್ಪಣೆಗೈದರು.