ಬೆಳ್ತಂಗಡಿ;ಧರ್ಮಸ್ಥಳ ಸೊಸೈಟಿ ಸಿಇಒ ರವೀಂದ್ರನ್ ಡಿ ಅವರು ಸೋಮವಾರ ಬ್ಯಾಂಕಿನ ಸಭಾಂಗಣದಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಳಿಕ ನಡೆದ ವಿದ್ಯಮಾನದಲ್ಲಿ ಅವರ ಪತ್ನಿ ಉಷಾ ಅವರು ನೀಡಿದ ದೂರಿನಂತೆ ಇಬ್ಬರ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಸೆಕ್ಷನ್ನಡಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರುಗಳಾದ ಜಯರಾಮ ಭಂಡಾರಿ ಮತ್ತು ರಘುಚಂದ್ರ ಅವರ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ರವೀಂದ್ರನ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಹಬ್ಬುತ್ತಿರುವಂತೆಯೇ ಇದಕ್ಕೆಲ್ಲಾ ತೀವ್ರ ಒತ್ತಡ ಮತ್ತು ಅಪಮಾನವಸೆಗಿರುವುದೇ ಕಾರಣ ಎಂದು ಮೃತರ ಪತ್ನಿ ಉಷಾ ಬಹಿರಂಗವಾಗಿಯೇ ಆರೋಪಿಸಿದ್ದರು.
ಅದಕ್ಕೆ ಪೂರಕ ಎಂಬಂತೆ ಮೃತರು ಬರೆದಿಟ್ಟಿದ್ದರೆನ್ನಲಾದ ಡೆತ್ನೋಟ್ ನಲ್ಲಿ ಮೂವರ ಹೆಸರು ಪ್ರಸ್ತಾಪವಾಗಿತ್ತು.
ಅಲ್ಲದೆ ಸದ್ರಿ ಪತ್ರದಲ್ಲಿ, "ಅಧ್ಯಕ್ಷರ ಮೇಲೆ ಒತ್ತಡ ಹೇರಿದ ಸ್ವರ್ಣಗೌರಿ, ಜಯರಾಮ ಭಂಡಾರಿ ಮತ್ತು ರಘುಚಂದ್ರ ಇವರನ್ನು ಕ್ಷಮಿಸುವುದಿಲ್ಲ ಎಂದು ಬರೆದುಕೊಂಡಿದ್ದರು.
ಈಎಲ್ಲಾ ಹಿನ್ನೆಲೆಯಲ್ಲಿ ಪ್ರಕರಣವನ್ನು ಪರಿಶೀಲಿಸಿದ ಪೊಲೀಸರು ಆರಂಭಿಕ ಹಂತದಲ್ಲಿ ಇಬ್ಬರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು , ಮೃತರ ಪತ್ನಿ ಉಷಾ ಅವರು ಘಟನೆಯ ಬಳಿಕ ತೀವ್ರ ಆಘಾತಕ್ಕೊಳಗಾಗಿ ಸಂಪೂರ್ಣ ಗದ್ಗದಿತರಾಗಿದ್ದು, ಮಾತನಾಡುವುದಕ್ಕಾಗಲೀ, ಪೊಲೀಸರಿಗೆ ಹೇಳಿಕೆ ಕೊಡುವುದಕ್ಕಾಗಲೀ ಕಷ್ಟವಾಗಿದೆ. ಈ ಪ್ರಕರಣದ ಹಿಂದೆ ಇನ್ನೂ ಹಲವರಿದ್ದಾರೆನ್ನಲಾಗಿದ್ದು,
ಉಷಾ ಅವರನ್ನು ಎರಡು ದಿನಗಳ ಬಳಿಕ ಮತ್ತೊಮ್ಮೆ ಹೇಳಿಕೆ ಪಡೆದು ಇನ್ನೂ ಒಂದಿಬ್ಬರ ಮೇಲೆ ಕೇಸು ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಡೆತ್ನೋಟ್ ನಲ್ಲಿರುವ ಅಂಶಗಳೇನೇನು?
ಆತ್ಮಹತ್ಯೆಗೂ ಮುನ್ನ ಸಿಇಒ ರವೀಂದ್ರನ್ ಡಿ ಅವರು ಬರೆದಿಟ್ಟಿದ್ದಾರೆನ್ನಲಾದ ಡೆತ್ನೋಟ್ ನಲ್ಲಿ, ಅಧ್ಯಕ್ಷರನ್ನು ನಾನು ಎಂದೂ ಸೋಲಲು ಬಿಡುವುದಿಲ್ಲ. ಮೋಸದಿಂದ ಅಧ್ಯಕ್ಷರ ಮೇಲೆ ಒತ್ತಡ ಹೇರಿದ ಸ್ವರ್ಣಗೌರಿ, ಜಯರಾಮ ಭಂಡಾರಿ ಮತ್ತು ರಘುಚಂದ್ರ ಇವರನ್ನು ಕ್ಷಮಿಸುವುದಿಲ್ಲ.
ನನ್ನ ಮಗಳಿಗೆ ಕ್ಲಾರ್ಕ್ ಕೆಲಸ ಕೊಡಿಸಿ, ಬೋಳಿಯಾರಿನಲ್ಲಿ 0.12 ಎಕ್ರೆ ಮತ್ತು ಪಾಲಿನಲ್ಲಿ ಎರಡು ಎಕ್ರೆ ಜಮೀನು ಬರಬೇಕು ಅದನ್ನು ಕೊಡಿಸಿ. ಇಡೀ ಜೀವನವನ್ನು ಸಂಘಕ್ಕಾಗಿ ಮೀಸಲಿಟ್ಟ ನಾನು ಅಂತ್ಯಕಾಲದಲ್ಲಿ ಮುಠ್ಠಾಳರಿಬ್ಬರಿಂದ ಅವಮಾನಿತನಾಗಲು ಬಯಸುವುದಿಲ್ಲ. ಸನ್ಮಿತ್ರ ಸಹೋದ್ಯೋಗಿಗಳಿಗೆ ಶುಭಾಶಯಗಳು. ಶತ್ರುಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬರೆದಿದ್ದಾರೆ.
ಡೆತ್ನೋಟ್, ರಾಜೀನಾಮೆ ಪತ್ರದ ಅಕ್ಷರ- ಸಹಿಗಳಲ್ಲಿ ವ್ಯತ್ಯಾಸ;
ಈ ಮಧ್ಯೆ ರವೀಂದ್ರನ್ ಅವರು ಬರೆದಿಟ್ಟಿದ್ದಾರೆನ್ನಲಾದ ಡೆತ್ನೋಟ್ ಮತ್ತು ಅವರು ಬ್ಯಾಂಕಿನಲ್ಲಿ ಇಟ್ಟಿದ್ದ ನಿವೃತ್ತಿ ಅವಧಿ ಪೂರ್ವ ರಾಜೀನಾಮೆ ಪತ್ರದ ಅಕ್ಷರಗಳಿಗೆ ಅಜಗಜಾಂತರ ವ್ಯತ್ಯಾಸ ಕಂಡುಬಂದಿದೆ. ಸಹಿಯಲ್ಲೂ ಕೂಡ ಸಣ್ಣ ಬದಲಾವಣೆ ಇದೆ.
ಡೆತ್ನೋಟ್ ಬರೆದು ಅವರು ಮೊಬೈಲ್ ನಲ್ಲಿ ಫೋಟೋ ತೆಗೆದಿಟ್ಟಿದ್ದರೆಂದು ಹೇಳಲಾಗಿದೆ. ಅವರ ಮನೆಯವರು ಹೇಳುವ ಪ್ರಕಾರ ಡೆತ್ನೋಟ್ ನಲ್ಲಿರುವುದು ರವೀಂದ್ರನ್ ಅವರದೇ ಹಸ್ತಾಂಕ್ಷರ. ಆದರೆ ರಾಜೀನಾಮೆ ಪತ್ರ ಮಾತ್ರ ಯಾರೋ ಬರೆದ ಪತ್ರಕ್ಕೆ ಬಲಾತ್ಕಾರವಾಗಿ ಅವರ ಸಹಿ ಮಾಡಿಸಿರಬಹುದು ಅಥವಾ ಅದರಲ್ಲಿ ಅವರ ನಕಲಿ ಸಹಿ ಬಳಸಿರಬಹುದು ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.