ಬೆಳ್ತಂಗಡಿ; ರಾಷ್ಟ್ರೀಯ ಹೆದ್ದಾರಿಯ ಉಜಿರೆ - ಸೋಮಂತಡ್ಕ ಮಧ್ಯೆ ಸೀಟು ರಕ್ಷಿತಾರಣ್ಯ ಪ್ರದೇಶದಲ್ಲಿ ಅಪರಿಚಿತ ವಾಹನವೊಂದು ಬೈಕ್ಗೆ ಡಿಕ್ಕಿಯಾಗಿ ಪರಾರಿಯಾಗಿದೆ. ಘಟನೆಯಿಂದ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ವೇಳೆ ಸಮಾಜ ಸೇವಕ ಚಾರ್ಮಾಡಿ ಹಸನಬ್ಬ ಅವರ ಇಬ್ಬರು ಪುತ್ರರಾದ ಅಯಾಝ್ ಮತ್ತು ಅಝ್ಮಾನ್ ಎಂಬವರು ತಮ್ಮ ವೈಯುಕ್ತಿಕ ಕೆಲಸಕ್ಕೆಂದು ಕಾರಿನಲ್ಲಿ ಉಜಿರೆಗೆ ಹೋಗಿದ್ದವರು ಮರಳುವ ವೇಳೆ ನಡು ರಸ್ತೆಯಲ್ಲಿ ಬೈಕ್ ಮಗುಚಿಬಿದ್ದ ಸ್ಥಿತಿಯಲ್ಲಿದ್ದರೆ, ಪಕ್ಕದಲ್ಲೇ ವ್ಯಕ್ತಿಯೊಬ್ಬರು ತಲೆಗೆ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರಪಕ್ಕದಲ್ಲೇ ಮಹಿಳೆಯೊಬ್ಬರು ಗೋಗರೆಯುತ್ತಾ ಕುಳಿತಿದ್ದರು. ಈಸ್ಥಳದಲ್ಲಿ ಅದಾಗಲೇ ಹತ್ತಿಪ್ಪತ್ತು ವಾಹನಗಳವರು ನಿಲ್ಲಿಸಿ ಇವರ ದೃಷ್ಯಗಳನ್ನು ನೋಡುತ್ತಿದ್ದರೇ ಹೊರತು ಯಾರೊಬ್ಬರೂ ಪ್ರಥಮ ಚಿಕಿತ್ಸೆಗೆ ಸ್ಪಂದಿಸುವ ಕಾರ್ಯ ಮಾಡಿರಲಿಲ್ಲ. ಇಬ್ಬರು ಸಹೋದರರು ತಕ್ಷಣ ಸ್ಪಂದಿಸಿ, ಗಾಯಾಳುವನ್ನು ಸಂತೈಸಿ ತಮ್ಮದೇ ಕಾರಿನಲ್ಲಿ ಎತ್ತಿ ಹಾಕಿಕೊಂಡು ಉಜಿರೆ ಬೆನಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಲ್ಲಿ ಪ್ರಥಮ ಚಿಕಿತ್ಸೆ ಕೈಗೊಳ್ಳುವ ವೇಳೆ ಗಾಯಾಳುವಿನ ಸ್ಥಿತಿ ಗಂಭೀರವಾಗಿರುವುದರಿಂದ ಮತ್ತು ಒಂದು ಕಣ್ಣಿಗೂ ಭಾರೀ ಏಟು ಬಿದ್ದಿರುವುದರಿಂದ ತಕ್ಷಣ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಸಹೋದರರು ಹೇಳುವಂತೆ ಘಟನೆ ನಡೆದು ಸುಮಾರು ಅರ್ಧ ಗಂಟೆಯಷ್ಟು ಸಮಯ ಅದಾಗಲೇ ಆಗಿತ್ತೆಂದು ಅಲ್ಲಿದ್ದವರು ತಿಳಿಸಿದ್ದಾರೆ. ಗಾಯಾಳು ರಕ್ತಶ್ರಾವವಾಗಿ ಬಿದ್ದುಕೊಂಡಿದ್ದರಿಂದ ಅವರು ಮೃತರಾಗಿದ್ದಾರೆ ಎಂದೇ ತಿಳಿದು ಎಲ್ಲರೂ ನೋಡುತ್ತಾ ನಿಂತಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.