ನಿವೃತ ಯೋಧನಿಗೆ ಅದ್ದೂರಿ ಸ್ವಾಗತ
ಬೆಳ್ತಂಗಡಿ: ಸೈನ್ಯದ ಸೇವೆ ಎಂದರೆ ಅದೊಂದು ವಿಶೇಷ ಸೇವೆ. ಸೇನೆಗೆ ಸೇರುವಾಗ ಬಲಿದಾನ ಮಾಡುವುದಾಗಿ ಯಾರೂ ಒಪ್ಪಿಕೊಂಡು ಹೀಗುವ ಪರಿಪಾಠವಿಲ್ಲ.ಆದರೆ ಸೇವಾವಧಿಯಲ್ಲಿ ಎಲ್ಲ ತ್ಯಾಗಕ್ಕೂ ಸನ್ನದ್ದವಾಗಿರುವುದೇ ವಿಶೇಷ. ಸೇವೆ ಮುಗಿಸಿ ಮರಳಿದ ಯತೀಂದ್ರ ಅವರು ಈ ಸಮಾಜಕ್ಕೆ ಆದರ್ಶ ಕೊಡುಗೆಯಾಗಲಿ ಎಂದು ನಿವೃತ್ತ ಮೇಜರ್ ಜನರಲ್ ಎಂ.ವಿ ಭಟ್ ಹೇಳಿದರು.
ಭಾರತೀಯ ಭೂಸೇನೆಯಲ್ಲಿ 17ವರ್ಷ ಸೇವೆಗೈದು ನಿವೃತ್ತಿಹೊಂದಿ ತವರೂರಿಗೆ ಆಗಮಿಸಿದ ಯೋಧ ಯತೀಂದ್ರ ಎಚ್.ಜೆ ಅವರಿಗೆ ಮುಂಡಾಜೆಯ ಕಲಾಕುಂಚ ನೇತೃತ್ವದಲ್ಲಿ ಮುಂಡಾಜೆ ಹಾಗೂ ಕಡಿರುದ್ಯಾವರ ಗ್ರಾಮಸ್ಥರ ವತಿಯಿಂದ ಅದ್ದೂರಿ ಸ್ವಾಗತ ಮತ್ತು ಅಭಿನಂದನೆ ಸಮಾರಂಭ ಗುರುವಾರ ಸೋಮಂತಡ್ಕದಲ್ಲಿ ನಡೆದು ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಸಮಾರಂಭದ ಇನ್ನೋರ್ವ ಅತಿಥಿಯಾಗಿದ್ದ ನಿವೃತ ಯೋಧ ಹಾಗೂ ವೇಣೂರು ಐಟಿಐ ಮಾಜಿ ಪ್ರಾಂಶುಪಾಲ ಎಂ.ಆರ್ ಜೈನ್ ಮಾತನಾಡಿ, ಈ ಕಾಲಘಟ್ಟದಲ್ಲಿ ಯುವಶಕ್ತಿ ದುರ್ವ್ಯಯವಾಗುತ್ತಿದೆ. ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯ ದೃಢತೆ ಕಾಯ್ದುಕೊಂಡು ದೇಶ ಸೇವೆ, ಸಮಾಜ ಸೇವೆ, ದೇವರ ಸೇವೆಗೆ ತಯಾರಾಗಬೇಕು. 35 ವರ್ಷಗಳ ಹಿಂದೆ ವೀರೇಂದ್ರ ಹೆಗ್ಗಡೆಯವರು ವೇಣೂರುನಲ್ಲಿ ಸ್ಥಾಪಿಸಿದ ಐಟಿಐ ಯಲ್ಲಿ ಪ್ರಾಥಮಿಕ ತರಬೇತಿ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿ ದೇಶವನ್ನು ಕಾಯುವುದು ಯೋಧರ ಕರ್ತವ್ಯ. ಸೈನ್ಯ ಎಂಬುದು ಉದ್ಯೋಗವಲ್ಲ ಅದೊಂದು ಸೇವೆ, ಅಲ್ಲಿ ಇಷ್ಟದಿಂದ ಕೆಲಸ ಮಾಡಿದರೆ ಯಾವುದೇ ಕಷ್ಟವಿಲ್ಲ,ದೇಶವನ್ನು ರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿರಬೇಕು ಎಂದು ಹೇಳಿದರು. ತನ್ನನ್ನು ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಘೋಷಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೃಷಿಕ ಮಚ್ಚಿಮಲೆ ಆನಂತ ಭಟ್ ಮಾತನಾಡಿ, ಇಸ್ರೇಲ್ ಮಾದರಿಯಲ್ಲಿ ನಮ್ಮಲ್ಲೂ
ಸೇನಾ ಕರ್ತವ್ಯ ಕಡ್ಡಾಯವಾಗಬೇಕು. ಆಗ ಶಿಸ್ತು ನೆಲೆಗೊಳ್ಳುತ್ತದೆ. ಯತೀಂದ್ರ ಅವರು ಮುತುವರ್ಜಿ ವಹಿಸಿ ಮಾಜಿ ಸೈನಿಕರ ಸಂಘದ ಮೂಲಕ ಶಾಲೆಗಳಲ್ಲಿ ಸೇನಾ ನೇಮಕಾತಿಗೆ ಪ್ರೇರಣೆ ನೀಡಬೇಕು ಎಂದು ಸಲಹೆ ನೀಡಿದರು.
ಮುಂಡಾಜೆ ಗ್ರಾ. ಪಂ. ಸದಸ್ಯೆ ರಂಜಿನಿ, ಕಡಿರುದ್ಯಾವರ ಗ್ರಾ.ಪಂ ಸದಸ್ಯ ಅಶೋಕ್ ಕುಮಾರ್, ಯೋಧನ ಹೆತ್ತವರಾದ ಜಗದೀಶ್ ಮತ್ತು ರಮಣಿ, ಪತ್ನಿ ಶ್ರೀ ವಿದ್ಯಾ, ಮಕ್ಕಳಾದ ವಿಯಾನ್ ಮತ್ತು ವಿಶಿಕಾ, ಹಾಗೂ ಅಜ್ಜಿ, ವೇದಿಕೆಯಲ್ಲಿದ್ದರು.
ನಾರಾಯಣ ಪೂಜಾರಿ ಸ್ವಾಗತಿಸಿದರು. ಕಾರ್ಯಕ್ರಮದ ಪ್ರಧಾನ ಸಂಯೋಜಕ ಜಯರಾಮ ಕೆ. ಕಾರ್ಯಕ್ರಮ ನಿರೂಪಿಸಿದರು. ದೀಕ್ಷಿತ್ ವಂದಿಸಿದರು. ಸಂಘ ಸಂಸ್ಥೆಯವರು ಮಾಲಾರ್ಪಣೆ ಮಾಡಿ ಯೋಧನಿಗೆ ಗೌರವ ಸಲ್ಲಿಸಿದರು.
ಮೆರವಣಿಗೆ;
ಭಾರತಾಂಬೆಗೆ ಪುಷ್ಪಾರ್ಚನೆ ಸಲ್ಲಿಸಿ ಸೋಮಂತಡ್ಕ ಪೇಟೆಯಿಂದ ಕಡಿರುದ್ಯಾವರ ಗ್ರಾಮದ ಮಠ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ವರೆಗೆ ನಿವೃತ್ತ ಸೈನಿಕನನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತಂದು, ಪ್ರಾರ್ಥನೆ ಸಲ್ಲಿಸಿ ಬಳಿಕ ಅವರ ಮನೆವರೆಗೂ ತೆರಳಿ ಬೀಳ್ಕೊಡಲಾಯಿತು.