ಬೆಳ್ತಂಗಡಿ : ಕಪುಚಿನ್ ಕೃಷಿಕ್ ಸೇವಾ ಕೇಂದ್ರ (ರಿ)ವಿಮುಕ್ತಿ ಗ್ರಾಮಾಭಿವೃದ್ಧಿ ಯೋಜನೆ ಲಾಯಿಲ ಇದರ ನಿರ್ದೇಶಕರೂ ಆಗಿರುವ ನ್ಯಾಯವಾದಿ ಹಾಗೂ ಸ್ವತಃ ಧರ್ಮಗುರುಗಳೂ ಆಗಿರುವ ಫಾ. ವಿನೋದ್ ಮಸ್ಕರೇನ್ಹಸ್ ಅವರು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲದೇ ರಕ್ತದಾನಿಯಾಗಿಯೂ ಗುರುತಿಸಿಕೊಂಡಿದ್ದು ಅವರ 100ನೇ ರಕ್ತದಾನ ಕಾರ್ಯಕ್ರಮದ ಜೊತೆಗೆ ಉಜಿರೆಯಲ್ಲಿ ಜ.17 ರಂದು ಸಾರ್ವಜನಿಕರಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ವಿಮುಕ್ತಿ ಸಂಸ್ಥೆ ಲಾಯಿಲ, ಸಂತ ಅಂತೋನಿ ಚರ್ಚ್ ಉಜಿರೆ, ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಇವರು ಸಹಯೋಗ ನೀಡುತ್ತಿದ್ದು, ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆ ಸಹಕಾರದೊಂದಿಗೆ ಶಿಬಿರ ಸಂಪನ್ನಗೊಳ್ಳಲಿದೆ. ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿರುವ ಈ ಶಿಬಿರದಲ್ಲಿ 100 ಯುನಿಟ್ ರಕ್ತ ಸಂಗ್ರಹದ ಗುರಿಹೊಂದಲಾಗಿದೆ ಎಂದು ಫಾ. ವಿನೋದ್ ಮಸ್ಕರೇನ್ಹಸ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರಕ್ತದಾನ ನಡೆಯಲಿದ್ದು ಉದ್ಘಾಟನಾ ಸಮಾರಂಭದಲ್ಲಿ ಉಜಿರೆ ಸಂತ ಅಂತೋನಿ ಚರ್ಚ್ನ ಫಾ. ಜೇಮ್ಸ್, ಮುಂಡಾಜೆ ಯಂಗ್ ಚಾಲೆಂಜರ್ಸ್ನ ಸಂಚಾಲಕ ನಾಮದೇವ್ ರಾವ್ ಮುಂಡಾಜೆ ಪಾಲ್ಗೊಳ್ಳಲಿದ್ದಾರೆ ಎಂದರು.
‘ರಕ್ತದಾನ ಮಾಡುವ ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು ವೈಯಕ್ತಿಕ ಅಂತರದೊಂದಿಗೆ ಮಾಸ್ಕ್ ಕಡ್ಡಾಯವಾಗಿ ಧರಿಸಿಕೊಳ್ಳಬೇಕು. ಜ್ವರ, ಕೆಮ್ಮು, ಉಸಿರಾಟ ತೊದರೆಯ ಲಕ್ಷಣಗಳು ಇದ್ದಲ್ಲಿ ರಕ್ತದಾನ ಕೊಠಡಿಗೆ ಹೋಗುವುದನ್ನು ನಿಷೇಧಿಸಲಾಗಿದೆ’ ಎಂದರು.
ಈ ವೇಳೆ ವಿಮುಕ್ತಿ ಸಂಸ್ಥೆಯ ಸಹ ನಿರ್ದೇಶಕ ಫಾ. ರೋಹನ್ ಲೋಬೋ ಇದ್ದರು.