ಬೆಳ್ತಂಗಡಿ: ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಮಣೇಲು ಎಂಬಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ವ್ಯಕ್ತಿಯೋರ್ವರನ್ನು ಅವರ ಸಹೋದರಿಯ ಪುತ್ರ ಕತ್ತಿಯಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಅ.8 ರಂದು ಬೆಳಕಿಗೆ ಬಂದಿದೆ.
ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಪಡೆಗಳ ಠಾಣಾ ವ್ಯಾಪ್ತಿಯ ಕರಿಮಣೇಲು ಗ್ರಾಮದ ಗಾಂಧಿನಗರ ನೂಯಿ ನಿವಾಸಿ ಸಂಜೀವ ಶೆಟ್ಟಿ(60.ವ) ಎಂಬವರೇ ಕೊಲೆಯಾದ ವ್ಯಕ್ತಿ. ಅವರನ್ನು ಅವರ ಸಹೋದರಿಯ ಪುತ್ರ, ಸ್ವಂತ ಅಳಿಯ ಶ್ರೀಷಾ (36) ಎಂಬಾತನೇ ಕೊಲೆಗೈದವನು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಾಗದ ಪಾಲು ವಿಚಾರಕ್ಕೆ ಸಂಬಂಧಿಸಿದಂತೆ ಇದ್ದ ಜಗಳ ತಾರಕಕ್ಕೇರಿ ಈ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿ ಶ್ರೀಷಾ ಎಂಬಾತ ಕತ್ತಿಯಿಂದ ಕುತ್ತಿಗೆಗೆ, ತಲೆಗೆ ಮತ್ತು ಹೊಟ್ಟೆಗೆ ಕಡಿದಿರುವ ಪರಿಣಾಮ ತೀವ್ರ ರಕ್ತಸ್ರಾವಕ್ಕೊಳಗಾದ ಸಂಜೀವ ಶೆಟ್ಟಿ ಅವರು ಕವುಚಿ ಬಿದ್ದ ಸ್ಥಿತಿಯಲ್ಲಿ ಮನೆಯಲ್ಲೇ ಸಾವನ್ನಪ್ಪಿದ್ದಾರೆ.
ಕಳೆದ ರಾತ್ರಿಯೇ ನಡೆದ ಘಟನೆ;
ಸಂಜೀವ ಶೆಟ್ಟಿಯವರು ನೂಯಿ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಅವರಿಗೆ ಕುಡಿತದ ಅಭ್ಯಾಸವೂ ಇತ್ತು. ಪ್ರತಿದಿನಕೃಷಿ ಕೂಲಿ ಕೆಲಸ ಮಾಡಿಕೊಂಡು ಅವರಷ್ಟಕ್ಕೇ ಅವರು ಒಬ್ಬಂಟಿಯಾಗಿ ನೆಲೆಸಿದ್ದರು. ಅವರ ಮನೆಯ ಪಕ್ಕದಲ್ಲೇ ನೆಲೆಸಿರುವ ಆರೋಪಿ ಶ್ರೀಷಾ ಅವರ ಮಧ್ಯೆ ಜಾಗದ ಪಾಲು ವಿಚಾರಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಅಂತೆಯೇ ಅಕ್ಟೋಬರ್ 7 ರಂದು ಸಂಜೆ 6 ಗಂಟೆಯ ಬಳಿಕ ರಾತ್ರಿ ಸಮಯದಲ್ಲಿ ಇಬ್ಬರ ನಡುವೆ ಗಲಾಟೆ ನಡೆದು ಶ್ರೀಷಾ ತನ್ನ ಮಾವನಿಗೆ ಕತ್ತಿಯಿಂದ ಕಡಿದು ಈ ಕೊಲೆ ನಡೆಸಿದ್ದಾನೆ.
ಪಕ್ಕದ ಮನೆಯ ದೀಪಾ ಅವರು ಹುಡುಕಿಕೊಂಡು ಬಂದಿದ್ದಾಗ ಘಟನೆ ಬೆಳಕಿಗೆ
ಸಂಜೀವ ಶೆಟ್ಟಿ ಅವರು ಪ್ರತಿದಿನ ಕೃಷಿ ಕೂಲಿಗಾಗಿ ತೆರಳುತ್ತಿದ್ದರು. ಶುಕ್ರವಾರ ತಡವಾದರೂ ಸಂಜೀವ ಶೆಟ್ಟಿ ಅವರ ಮನೆ ಬಾಗಿಲು ತೆರೆದುಕೊಳ್ಳದ್ದರಿಂದ ಅವರ ಜೊತೆ ಯಾವತ್ತೂ ಕೆಲಸಕ್ಕೆ ಹೋಗುತ್ತಿದ್ದ ಪಕ್ಕದ ಮಹಿಳೆ ದೀಪಾ ಅವರು ಹುಡುಕಿಕೊಂಡು ಬಂದಿದ್ದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಕುಡಿತದ ಅಮಲು, ಜಾಗದ ಧ್ವೇಷ;
ಆರೋಪಿ ಮತ್ತು ಮೃತ ಸಂಜೀವ ಶೆಟ್ಟಿ ಇಬ್ಬರೂ ಕುಡಿತದ ದಾಸರು. ಶ್ರೀಷ ಮೃತ ಸಂಜೀವ ಶೆಟ್ಟಿ ಸಹೋದರಿ ಪುತ್ರ. ಆಗಾಗ ಜಗಳ ಮಾಡಿಕೊಳ್ಳುತ್ತಿದ್ದರು. ಕಳೆದ ರಾತ್ರಿ
ಶ್ರೀಷಾ ಕಂಠಪೂರ್ತಿ ಕುಡಿದಿದ್ದು ಇದೇ ಅಮಲಿನಲ್ಲಿ ಮಾವನನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ
ಮುಂಡಾಜೆ ಗೆ ಬಂದಿದ್ದ ಆರೋಪಿ;
ಆರೋಪಿ ಶ್ರೀಷಾ ನನ್ನು ಇದೀಗ ಪೊಲೀಸರು ಮುಂಡಾಜೆ ಗ್ರಾಮದ ಸೋಮಂತಡ್ಕ ಎಂಬಲ್ಲಿ ಆತನ ಮಿತ್ರನ ಮನೆಯಿಂದ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿ ತನಿಖೆಯ ವೇಳೆ, ತಾನು ಮಾವನಿಗೆ ಕಡಿದು ರಾತ್ರಿ ಅವರ ಜೊತೆಯೇ ಅಲ್ಲೇ ತಂಗಿದ್ದೆ ಎಂದು ಒಂದು ಬಾರಿ ಹೇಳುತ್ತಿದ್ದು, ಇನ್ನೊಂದು ಬಾರಿ ರಾತ್ರಿಯೇ ಅಲ್ಲಿಂದ ತಪ್ಪಿಸಿಕೊಂಡಿದ್ದೆ ಎನ್ನುತ್ತಾನೆ. ಆತ ಕುಡಿದ ಅಮಲಿನಲ್ಲಿ ಅಲ್ಲಿ ಏನು ಆಗಿದೆ ಎಂದೇ ಆತನಿಗೆ ಸರಿಯಾಗಿ ಗೊತ್ತಿಲ್ಲ. ಮಾವನಿಗೆ ಕಡಿದಿದ್ದರೂ ಅವರು ಮೃತಪಟ್ಟ ಬಗ್ಗೆ ಶ್ರೀಷಾ ನಿಗೆ ಮಾಹಿತಿಯೇ ಇರಲಿಲ್ಲ.
ಘಟನೆಯ ಬಗ್ಗೆ ಸಂಜೀವ ಶೆಟ್ಟಿ ಅವರ ಪುತ್ರ, ಬಂಟ್ವಾಳ ತಾಲೂಕಿನ ಎಸ್ವಿಎಸ್ ಕಾಲೇಜು ಬಳಿ ನಿವಾಸಿ ಜಗನ್ನಾಥ ಪೊಲೀಸರಿಗೆ ದೂರು ನೀಡಿದ್ದಾರೆ. ಮೃತದೇಹವನ್ನು ಮಂಗಳೂರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೋಗಿ ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಎರಡು ಮದುವೆಯಾಗಿದ್ದ ಸಂಜೀವ ಶೆಟ್ಟಿ;
ಕೊಲೆಯಾಗಿರುವ ಸಂಜೀವ ಶೆಟ್ಟಿ ಅವರು ಎರಡು ಮದುವೆಯಾಗಿದ್ದಾರೆ. ಅವರ ಮೊದಲ ಪತ್ನಿ ಪದ್ಮಾವತಿ ಎಂಬವರು.ಎರಡನೇ ಪತ್ನಿ ಜಯಂತಿ.ಅದರಲ್ಲಿ ಆಶಲತಾ ಮತ್ತು ಅಶ್ವಥ್ ಎಂಬ ಎರಡು ಮಕ್ಕಳಿದ್ದಾರೆ. ಅಮಲು ಸೇವನೆ ಚಟ ಇರುವುದರಿಂದಾಗಿ ಸಂಜೀವ ಶೆಟ್ಟಿ ನೂಯಿ ಎಂಬಲ್ಲಿನ ಮನೆಯಲ್ಲಿ ಒಬ್ಬಂಟಿಯಾಗಿಯೇ ವಾಸವಾಗಿದ್ದರು.
ಆರೋಪಿ ಶ್ರೀಷಾ ಅಂತರ್ಜಾತಿ ಯುವತಿಯೊಬ್ಬರನ್ನು ಪ್ರೀತಿಸಿಅವರ ಜೊತೆ ನೆಲೆಸಿದ್ದಾನೆ ಎಂದು ಗೊತ್ತಾಗಿದೆ. ಇದೀಗ ತನ್ನ ಮಾವನನ್ನು ಕೊಂದ ಆರೋಪದಲ್ಲಿ ಬಂಧಿತನಾಗಿ ಜೈಲು ಸೇರಿದ್ದಾನೆ
ಆರು ಕಡೆ ಗಂಭೀರವಾಗಿ ತಿವಿದ ಗಾಯ;
ಸಂಜೀವ ಶೆಟ್ಟಿ ಅವರ ಮರಣೋತ್ತರ ಪರೀಕ್ಷೆ ದೇರಳಕಟ್ಟೆ ಆಸ್ಪತ್ರೆಯ ಶವಾಗಾರದಲ್ಲಿ ನಡೆದಿದ್ದು, ಈ ವೇಳೆ ಅವರ ದೇಹದಲ್ಲಿ ವಿವಿಧ ಕಡೆ ಒಟ್ಟು ಆರು ಬಾರಿ ತಿವಿದ ಗಂಭೀರ ಗಾಯ ಪತ್ತೆಯಾಗಿದೆ. ಕುಡಿತದ ಅಮಲಿನಲ್ಲಿ ಶ್ರೀಷಾ ಸಿಕ್ಕ ಸಿಕ್ಕ ಕಡೆಗೆಲ್ಲಾ ಮಾವನನ್ನು ಕತ್ತಿಯಿಂದ ಕಡಿದಿದ್ದಾನೆ.
ಇದೀಗ ಘಟನೆ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಸಹಿತ ವೇಣೂರು ಠಾಣೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.