ಬೆಳ್ತಂಗಡಿ: ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ನಗರ ಪಂಚಾಯತ್ ಕಟ್ಟಡ ಸೇರಿದಂತೆ ಸರಕಾರಿ ಬಾವಿ ಆವರಣ ಗೋಡೆ, ಸಾರ್ವಜನಿಕ ಪ್ರದೇಶದಲ್ಲಿ ಸ್ಥಳೀಯ ಸಕ್ಷಮ ಪ್ರಾಧಿಕಾರದ ಅಧಿಕೃತ ಅನುಮತಿ ಪಡೆಯದೆ ಬಿತ್ತಿ ಪತ್ರಗಳನ್ನು ಅಂಟಿಸಿದ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಅಧ್ಯಕ್ಷ ಮುಸ್ತಾಫ ಎಂಬವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಡಿ.11ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿಈ ಸಂಘಟನೆಯವರು, 'ಈಡಿ ಆರ್.ಎಸ್.ಎಸ್ ಆಸ್ತ್ರವಾಗುವುದನ್ನು ತಡೆ ಯೋಣ- ದೇಶವ್ಯಾಪಿ ಪ್ರತಿಭಟನೆ' ಎಂಬ ಪ್ರತಿರೋಧ ಸಭೆ ಹಮ್ಮಿಕೊಂಡಿದ್ದಾರೆ. ಆದರೆ ಈ ಬಗ್ಗೆ ಭಿತ್ತಿ ಪತ್ರವನ್ನು ಪ್ರದರ್ಶಿಸಲು, ಬ್ಯಾನರ್ ಹಾಕಲು ಅನುಮತಿ ಪಡೆದಿರಲಿಲ್ಲ. ಆ ಹಿನ್ನಲೆಯಲ್ಲಿ ಈ ಕೇಸು ದಾಖಲಾಗಿದೆ.