ನೆರಿಯ: ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಂಜಾರುಮಲೆ ಪ್ರದೇಶದ ಚುನಾವಣೆ ಮತಗಟ್ಟೆ ಪರಿಶೀಲನೆಗೆ ತೆರಳಿದ್ದ ಅಧಿಕಾರಿಗಳಿಗೆ ರಸ್ತೆಯಲ್ಲೇ ಒಂಟಿ ಸಲಗ ಎದುರಾಗಿದೆ. ಇದು ಅಧಿಕಾರಿಗಳ ಪಾಲಿಗೆ ಹೊಸ ಅನುಭವವಾದರೆ ಆ ಭಾಗದಲ್ಲಿ ನೆಲೆಸಿರುವ ನಲುವತ್ತರಷ್ಟು ಕುಟುಂಬಕ್ಕೆ ನಿತ್ಯದ ಪಾಡಾಗಿದೆ ಎಂದರೆ ತಪ್ಪಲ್ಲ.
ನೆರಿಯ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ, ಚುನಾವಣಾ ಅಧಿಕಾರಿ ರಘು, ಸಹಾಯಕ ಚುನಾವಣಾಧಿಕಾರಿ ಅಜಿತ್ ಹಾಗೂ ನೆರಿಯ ಗ್ರಾ.ಪಂ ಸಿಬ್ಬಂದಿಗಳು ಚಾರ್ಮಾಡಿ ಘಾಟಿಯ 9ನೇ ತಿರುವಿನಿಂದ ಸುಮಾರು 15 ಕಿ.ಮೀ ಒಳಗಿನ ಪ್ರದೇಶದಲ್ಲಿರುವ ಬಾಂಜಾರುಮಲೆ ಪ್ರದೇಶದಲ್ಲಿರುವ ಚುನಾವಣಾ ಮತಗಟ್ಟೆ ಪರಿಶೀಲನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಕಾಡಿನಿಂದ ಆವೃತ್ತವಾಗಿರುವ ಈ ಪ್ರದೇಶದಲ್ಲಿ ಸುಮಾರು 260 ಮತದಾರರಿಗೆ ಬಾಂಜಾರುಮಲೆ ಸಮುದಾಯ ಭವನದಲ್ಲಿ ಮತಗಟ್ಟೆ ಇದೆ. ಈ ಪ್ರದೇಶದ ಹತ್ತಿಪ್ಪತ್ತು ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಸಾಕಷ್ಟು ಅಭಿವೃದ್ಧಿ ಕಂಡಿದೆ. ಆದರೆ ಇನ್ನೂ ಅಲ್ಲಿನ ಜನರ ಅನೇಕ ಬೇಕುಗಳು ಬಾಕಿ ಇವೆ. ಈ ಪ್ರದೇಶಕ್ಕೆ ಡಿಸಿ ಒಬ್ಬರು ಭೇಟಿ ನೀಡಲಿದ್ದಾರೆ ಎಂಬ ಕಾರಣಕ್ಕೆ ಆ ಭಾಗದ ಅಂದಿನ ಜನರು ಅಭಿಮಾನದಿಂದ ಡಿಸಿ ಬಂದು ಕುಳಿತುಕೊಳ್ಳಲು ಕಟ್ಟೆನಿರ್ಮಿಸಿದ್ದರು. ಆದರೆ ಡಿಸಿ ಭೇಟಿ ರದ್ದಾಗಿದ್ದುದರಿಂದ ಕಟ್ಟೆಯನ್ನು ಜನ ಉದ್ಘಾಟಿಸದೆ ಹಾಗೆಯೇ ಬಿಟ್ಟಿದ್ದರು. ಇದಾದ ಅದೆಷ್ಟೋ ವರ್ಷಗಳ ಬಳಿಕ ಎಬಿ ಇಬ್ರಾಹಿಂ ಅವರು ಮಂಗಳೂರು ಡಿಸಿ ಆಗಿ ಬಂದ ಬಳಿಕ ಬಾಂಜಾರು ಮಲೆಗೆ ಭೇಟಿ ನೀಡಿ ಡಿಸಿ ಕಟ್ಟೆಯಲ್ಲಿ ಕುಳಿತು ಜನರ ಅಹವಾಲು ಆಲಿಸಿದ್ದರು. ಆ ಬಳಿಕ ಅವರು ಅಲ್ಲಿನಜನರಿಗೆ ಅಲ್ಲೇ ಇರುವ ಸಮಾಜ ಮಂದಿರದಲ್ಲಿ ಮತಗಟ್ಡೆಯೊಂದನ್ನು ಮಂಜೂರುಗೊಳಿಸಿದ್ದರು.
ಈ ಮತಗಟ್ಟೆಯ ಪರಿಶೀಲನೆ ನಡೆಸಿ ವಾಪಾಸಾಗುತ್ತಿದ್ದ ಅಧಿಕಾರಿಗಳ ತಂಡಕ್ಕೆ ಕಾಡಾನೆ ಅಡ್ಡಕ್ಕೆ ಸಿಕ್ಕಿದೆ. ಇಲ್ಲಿರುವ ಏನೆಪೋಯ ಕಿರುಜಲ ವಿದ್ಯುತ್ ಘಟಕದ ಅಣೆಕಟ್ಟಿನ ಪ್ರದೇಶದಲ್ಲಿ ಒಂಟಿಸಲಗ ತಿರುಗಾಡುತ್ತಿತ್ತು.
ಅಪಾಯದ ಮುನ್ಸೂಚನೆ ಅರಿತು ಅಧಿಕಾರಿಗಳು ಸಮೀಪದ ಕಿರುರಸ್ತೆಯಲ್ಲಿ ತಮ್ಮ ವಾಹನವನ್ನು ಗಂಟೆಗಳಕಾಲ ನಿಲ್ಲಿಸಿ ಆನೆ ಹಾದು ಹೋದಬಳಿಕ ಅಲ್ಲಿಂದ ಮರಳುವಂತಾಯಿತು. ಆನೆ ದೂರದಿಂದಲೇ ಅದರ ಪಾಡಿಗೆ ಆಚೆಯೇ ಹೋದುದರಿಂದ ಅಪಾಯ ತಪ್ಪಿದೆ.