ಬೆಳ್ತಂಗಡಿ : ಬುಧವಾರ ಸಂಜೆ ವೇಳೆ ಧರ್ಮಸ್ಥಳ ಕುದ್ರಾಯ ಸೇತುವೆಯ ಬಳಿ ನಿಲ್ಲಿಸಿದ್ದ ಬೊಲೆರೋ ವಾಹನದ ಮೇಲೆ ಕೆಎಸ್ಆರ್ಟಿಸಿ ಬಸ್ಸೊಂದು ಹರಿದಿದ್ದು ಸ್ಥಳದಲ್ಲೇ ಓರ್ವ ಮೃತಪಟ್ಟಿದ್ದಾರೆ.
ಉಳಿದಂತೆ ಐವರು ಮಹಿಳೆಯರು, ಓರ್ವ ಗಂಡಸು ಹಾಗೂ ಮಗು ಸೇರಿ ಒಟ್ಟು7 ಮಂದಿಗೆ ಗಾಯಗಳಾಗಿವೆ.
ಮೃತರನ್ನು ಮಂಡ್ಯ ಜಿಲ್ಲೆಯ ಚೆನ್ನಸಾಂದ್ರ ನಿವಾಸಿ ಮಾಹದೇವ (63) ಎಂಬವರೆಂದು ಗುರುತಿಸಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಯಾತ್ರಾರ್ಥಿಗಳಾಹಿ ಅಗಮಿಸುತ್ತಿದ್ದ ಮಂಡ್ಯ ಜಿಲ್ಲೆಯ ಹತ್ತು ಮಂದಿಯ ಕುಟುಂಬ ನಿಡ್ಲೆ ಗ್ರಾಮದ ಕುದ್ರಾಯ ಎಂಬಲ್ಲಿ ಬೊಲೇರೋ ವಾಹನವನ್ನು ರಸ್ತೆಯ ಬಲಕ್ಕೆ ನಿಲ್ಲಿಸಿ ವಾಹನದಿಂದಿಳಿದು ಪಕ್ಕದ ಅಂಗಡಿಗೆ ಹೋಗುತ್ತಿದ್ದರು.
ಈ ವೇಳೆ ಧರ್ಮಸ್ಥಳ ಡಿಪೋದಿಂದ ಮೈಸೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಂತಿದ್ದವರಿಗೆ ಹಾಗೂ ಅವರೆಲ್ಲ ಬಂದಿದ್ದ ಬೊಲೋರೊ ವಾಹನಕ್ಕೆ ನೇರವಾಗಿ ಡಿಕ್ಕಿ ಹೊಡೆದಿದೆ.
ಈ ವೇಳೆ ಮಹಾದೇವ ಅವರು ಗಂಭೀರ ರಕ್ತಸ್ರಾವ ಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದಂತೆ ಸಹಸವಾರರಾಗಿದ್ದ ಒಟ್ಟು ಏಳು ಮಂದಿ ಗಾಯಗೊಂಡರು.
ತಕ್ಷಣ ಎಲ್ಲ ಗಾಯಾಳುಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ.
ಅಪಘಾತ ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್, ಧರ್ಮಸ್ಥಳ ಎಸ್.ಐ ಅನಿಲ ಕುಮಾರ್, ಸಂಚಾರಿ ಠಾಣಾ ಎಸ್ಐ ಓಡಿಯಪ್ಪ ಹಾಗೂ ಸಿಬ್ವಂದಿಗಳು ಭೇಟಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.