ಬೆಳ್ತಂಗಡಿ: ಭವ್ಯ ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮುಂಚೂಣಿಯಲ್ಲಿದ್ದ ಮುಸ್ಲಿಂ ದೇಶಪ್ರೇಮಿಗಳ ನಾಮಗಳು ಇದೀಗ ಪಾಠಪುಸ್ತಕದಲ್ಲಿ ಕಾಣುತ್ತಿಲ್ಲ.ಹಿಂದೆ ಸ್ವಾತಂತ್ರ್ಯಹೋರಾಟಗಾರರ ಸಾಲಿನಲ್ಲಿ ಗಾಂಧಿ ನೆಹರೂ ಬೋಸ್ ಮೊದಲಾದರೊಂದಿಗೆ ಅಬುಲ್ ಕಲಾಂ ಆಝಾದ್, ಮುಹಮ್ಮದಲಿ, ಶೌಕತ್ತಲಿ, ಜಿನ್ನಾ, ಟಿಪ್ಪುಸುಲ್ತಾನ್ ಮುಂತಾದ ಐವತ್ತಕ್ಕಿಂತಲೂ ಮಿಗಿಲಾದ ಮುಸ್ಲಿಂ ಹೋರಾಟಗಾರರ ಹೆಸರೂ ಕಲಿತಿದ್ದೆವು. ಇದೀಗ ಅವುಗಳನ್ನೆಲ್ಲ ಪುಸ್ತಕಗಳಿಂದ ಕೈ ಬಿಟ್ಟು ಭಾರತ ಸ್ವಾತಂತ್ರ್ಯ ಕ್ಕೆ ಯಾವುದೇ ಸಂಬಂಧಪಡದ ವ್ಯಕ್ತಿಗಳ ಚರಿತ್ರೆಗಳನ್ನು ಅಳವಡಿಸಿರುವುದು ತೀರಾ ಖೇದಕರ.ಬೆಳೆದು ಬರುವ ಮಕ್ಕಳಲ್ಲಿ ಸ್ವಾತಂತ್ರ್ಯದ ಘನತೆ ಗೌರವ ನಷ್ಟಹೊಂದಲು ಅದು ಕಾರಣವಾಗಬಹುದು. ಆದ್ದರಿಂದ ಸರಕಾರ ಅತಿ ಶೀಘ್ರವಾಗಿ ಮುಸ್ಲಿಮರ ಸಹಿತ ಎಲ್ಲ ಸ್ವಾತಂತ್ರ್ಯಹೋರಾಟಗಾರರ ಹೆಸರುಗಳನ್ನೂ ಮರು ಅಳವಡಿಸಬೇಕೆಂದು ಕುಂಡಡ್ಕ ಜಮಾ ಅತ್ ಉಪಾಧ್ಯಕ್ಷರೂ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸೇವಾದಳ ಅಧ್ಯಕ್ಷರೂ ಆದ ಎಂ.ಕೆ ಅಬ್ದುಸ್ಸಮದ್ ರವರು ರಾಜ್ಯಸರಕಾರದೊಂದಿಗೆ ಮನವಿ ಮಾಡಿದರು.
ಅವರು ಕುಂಡಡ್ಕ ಶಂಸುಲ್ ಹುದಾ ಮಸೀದಿ ವಠಾರದಲ್ಲಿ ನಡೆದ ಭಾರತದ 75 ನೇ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಆಚರಣೆಯ ಪ್ರಯುಕ್ತ ನಡೆದ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕೃಷ್ಣಾಪುರ ಖಾಝಿ, ಕುಂಡಡ್ಕ ಆಡಳಿತ ಸಮಿತಿಯ ಗೌರವಾಧ್ಯಕ್ಷರೂ ಆದ ಈ.ಕೆ. ಇಬ್ರಾಹಿಂ ಮುಸ್ಲಿಯಾರ್ ಮದನಿ ಧ್ವಜಾರೋಹಣ ನಡೆಸಿ ಪ್ರಾರ್ಥಿಸಿದರು.
ಜಮಾಅತ್ ಅಧ್ಯಕ್ಷ ಸಿ.ಎಂ. ಆದಂ ಚೀಮುಳ್ಳು, ಸ್ಥಳೀಯ ಖತೀಬ್ ಇಲ್ಯಾಸ್ ಮದನಿ ಮಾಚಾರ್, ಮುಅಲ್ಲಿಂ ಅಬ್ದುರ್ರಝಾಖ್ ಮದನಿ ಕಬಕ, ಮಾಜಿ ಅಧ್ಯಕ್ಷ ಉಮರ್ ಹಾಜಿ ಕೊನಳೆ, ಜೊತೆ ಕಾರ್ಯದರ್ಶಿಗಳಾದ ಹನೀಫ್ ಅಕ್ಕರಕಾಡು, ಸಿ.ಎಂ ಬಶೀರ್ ಚೀಮುಳ್ಳು ಹಾಗೂ ಸದಸ್ಯರು ಹಾಜರಿದ್ದರು.
ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಕೊನಳೆ ಸ್ವಾಗತಿಸಿ ವಂದಿಸಿದರು.