ಬೆಳ್ತಂಗಡಿ: ನೆರಿಯ ತೋಟತ್ತಾಡಿ ಪರಿಸರದ ಪ್ರಥಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂತ ತೋಮಸ್ ಪ್ರೌಢ ಶಾಲೆಯಲ್ಲಿ 1988-89 ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಶಾಲೆಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯದ ಕೊಡುಗೆ ಸಮರ್ಪಣೆ ಕಾರ್ಯಕ್ರಮ ನಡೆಯಿತು.
ಇದೇ ಶಾಲೆಯಲ್ಲಿ ಕಲಿತು ಇಂದು ವಿವಿಧ ವೃತ್ತಿಯೊಂದಿಗೆ
ದೇಶ ವಿದೇಶಗಳಲ್ಲಿ ಯಶಸ್ಸು ಕಂಡಿರುವ ಪೂರ್ವ ವಿದ್ಯಾರ್ಥಿಗಳ ಸಮ್ಮಿಲನ ಯಶಸ್ವಿಯಾಗಿ ಮತ್ತು ಸಮಾಜಮುಖಿಯಾಗಿ ನಡೆಯಿತು. ಅಂದು ತಮಗೆ ಪಾಠ ಮಾಡಿದ್ದ ಎಲ್ಲಾ ಶಿಕ್ಷಕರನ್ನು ಕರೆಸಿ ಅವರಿಗೆ ಸನ್ಮಾನ ಮಾಡುವ ಮೂಲಕ ಗುರು ಗೌರವ ತೋರಿದರು.
ಅಂದಾಜು ಒಂದು ಲಕ್ಷ ಅರವತ್ತು ಸಾವಿರ ಮೌಲ್ಯದ ಉಪಕರಣಗಳನ್ನು ತಮ್ಮ ಶಾಲೆಗೆ ಸ್ಮರಣಿಕೆ ರೂಪದಲ್ಲಿ ನೀಡಿದರು.ಈ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಕೆ ಸಿ ಇ ಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಫಾ. ಶಾಜಿ ಮಾತ್ಯು ವಹಿಸಿದ್ದರು.ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫಾ. ಜೋಸ್ ವಳಿಯಪರಂಬಿಲ್ ಸ್ಮಾರ್ಟ್ ಕ್ಲಾಸ್ ಲೋಕಾರ್ಪಣೆ ಗೊಳಿಸಿದರು. ಐ ಟಿ ಪಿ ಸಿ ಎಲ್ ನ ಅಮೃತೇಶ್ವರ್ ಶುಭ ಹಾರೈಸಿದರು.ಫಾ. ರೋಕಿ ಮೇನಾಚೇರಿ ಹಳೆ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದರು. ಜೋಸೆಫ್, ಗಜಾನನ, ಜಾನ್ಸಿ, ಕಮಲಾಕ್ಷಿ ಹಾಗೂ ಪ್ರಸ್ತುತ ಸೇವೆಯಲ್ಲಿರುವ ತೋಮಸ್ ಹಾಗೂ ಇತರ ಸಿಬ್ಬಂದಿಗಳಾದ ದರ್ನಪ್ಪ, ಜಾರ್ಜ್ ರೋಸಮ್ಮ ಇವರನ್ನು ಸನ್ಮಾನಿಸಲಾಯಿತು. ವಿ.ಟಿ ಸೆಬಾಸ್ಟಿಯನ್, ಗ್ರಾ.ಪಂ ಉಪಾಧ್ಯಕ್ಷೆ ಕುಶಲ ಹಾಗೂ ಮುಖ್ಯೋಪಾಧ್ಯಾಯಿನಿ ತ್ರೇಸಿಯಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.