ಬೆಳ್ತಂಗಡಿ; ತುರ್ತು ಚಿಕಿತ್ಸೆ ಅರಿವು ನಮಗಿದ್ದರೆ ಇದರಿಂದ ನಮ್ಮ ಮನೆಯಲ್ಲೇ ಏನಾದರೂ ಆರೋಗ್ಯ ತುರ್ತು ಸಂದರ್ಭ ಎದುರಾದಾಗ ಸ್ವತಃ ನಮಗೂ, ಸಮಾಜದಲ್ಲಿ ಓಡಾಡುವಾಗ ಇನ್ನೂ ಅನೇಕರಿಗೆ ನಮ್ಮಿಂದ ಪ್ರಯೋಜನ ದೊರೆತಂತಾಗುತ್ತದೆ. ಆ ನಿಟ್ಟಿನಲ್ಲಿ ರೋಟರಿ ಸಮುದಾಯ ದಳ ಹಮ್ಮಿಕೊಂಡಿರುವ ಕಾರ್ಯಕ್ರಮ ಪರಿಣಾಮಕಾರಿ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು.
ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಸಮುದಾಯದಳ ಮುಂಡಾಜೆ ಇವರ ವತಿಯಿಂದ
ಉಜಿರೆ ಎಸ್ಡಿಎಂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಧಾನ ನೇತೃತ್ವದಲ್ಲಿ ಆ.10 ರಂದು ಆಸ್ಪತ್ರೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ
ಪ್ರಥಮ ಚಿಕಿತ್ಸೆ ಮತ್ತು ಜೀವರಕ್ಷಕ ತರಬೇತಿ (ಬೇಸಿಕ್ ಲೈಫ್ ಸಪೋರ್ಟ್) ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಂಜನ್ ಪ್ರಥಮ ಚಿಕಿತ್ಸೆಯ ಮಜಲುಗಳ ಬಗ್ಗೆ ವಿವರಿಸಿದರು. ನಿರ್ದೇಶಕ ಜನಾರ್ದನ್ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಪಿಪಿಟಿ ಮೂಲಕ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಮುಂಡಾಜೆ ರೋಟರಿ ಸಮುದಾಯ ದಳದ ಅಧ್ಯಕ್ಷ ಪಿ.ಸಿ ಸೆಬಾಸ್ಟಿಯನ್ ಮಾತನಾಡಿ, ತಾಲೂಕಿನ ಮೂಲೆಮೂಲೆಗಳಿಂದ ವಾರಿಯರ್ ಗಳು ಶಿಬಿರದಲ್ಲಿ ಭಾಗವಹಿಸುತ್ತಿರುವುದು ಖುಷಿ ಕೊಟ್ಟಿದೆ ಎಂದರು.
ಎಸ್ಡಿಎಂ ಆಸ್ಪತ್ರೆಯ ಡಾ. ಯಶಶ್ವಿನಿ, ಡಾ. ತೇಜಶ್ವಿನಿ ಮತ್ತು ಡಾ. ಚಿನ್ಮಯ್, ನರ್ಸಿಂಗ್ ಸುಪರಿಡೆಂಟ್ ಶೆರ್ಲಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾತ್ಯಕ್ಷಿಕೆ ಮತ್ತು ಪ್ರಶ್ನೋತ್ತರಗಳ ಮೂಲಕ ಪರಿಣಾಮಕಾರಿಯಾಗಿ ಶಿಬಿರ ನಡೆಸಿಕೊಟ್ಟರು.
ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಂಗೀತಾ ಕಾರ್ಯಕ್ರಮ ನಿರೂಪಿಸಿದರು. ಮಾರ್ಕೆಟಿಂಗ್ ಎಕ್ಸ್ ಕ್ಯೂಟಿವ್ ಉಮೇಶ್ ಗೌಡ ಸೇರಿದಂತೆ ಸಿಬ್ಬಂದಿಗಳು ಸಹಕರಿಸಿದರು. ಶಿಬಿರಾರ್ಥಿಗಳಾದ ಜೈಸನ್ ವೆರ್ನೂರು ಮತ್ತು ಅಶ್ರಫ್ ಆಲಿಕುಂಞಿ ಅನಿಸಿಕೆ ವ್ಯಕ್ತಪಡಿಸಿದರು. ತರಬೇತಿ ಪಡೆದ ಎಲ್ಲರಿಗೂ ಕೊನೆಯಲ್ಲಿ ಪ್ರಮಾಣಪತ್ರ ವಿತರಿಸಲಾಯಿತು.