ಬೆಳ್ತಂಗಡಿ: ಕೊರೊನಾ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಹಾಗೂ ಸೀಲ್ಡೌನ್ ಹೇರಲ್ಪಟ್ಟ ಪ್ರದೇಶದ ಎಲ್ಲಾ ಅರ್ಹ ಕುಟುಂಬಗಳಿಗೆ ಸರಕಾರವೇ ಆಹಾರದ ಕಿಟ್ ಒದಗಿಸುವಂತಾಗಲಿ ಮತ್ತು ಕೋವಿಡ್ನಿಂದ ಮೃತರಾದ ಕುಟುಂಬಕ್ಕೆ ಸರಕಾರ ಘೋಷಿಸಿರುವ 1 ಲಕ್ಷ ರೂ. ಪರಿಹಾರದ ಬದಲು ತಲಾ 10 ಲಕ್ಷ ರೂ.ನೀಡುವಂತಾಗಕಿ ಎಂದು ಬಹುಜನ ಸಮಾಜ ಪಕ್ಷ ಜಿಲ್ಲಾಧ್ಯಕ್ಷ ದಾಸಪ್ಪ ಎಡಪದವು ಆಗ್ರಹಿಸಿದ್ದಾರೆ.
ಬಹುಜನ ಸಮಾಜ ಪಕ್ಷ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ವತಿಯಿಂದ ಕೊಯ್ಯೂರು, ಕುವೆಟ್ಟು ಮತ್ತು ಲಾಯಿಲ ಗ್ರಾಮದ 200 ಕ್ಕೂ ಅಧಿಕ ಅರ್ಹ ಕುಟುಂಬಗಳಿಗೆ ಶುಕ್ರವಾರ ಆಹಾರದ ಕಿಟ್ ವಿತರಣೆ ನಡೆಸಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ಬಿಎಸ್ಪಿ ತಾಲೂಕು ಅಧ್ಯಕ್ಷ ಪಿ.ಎಸ್ ಶ್ರೀನಿವಾಸ ಮಾತನಾಡಿ, ಇದು ಪಕ್ಷದ ವತಿಯಿಂದ ಸಾಂಕೇತಿಕ ಸ್ಪಂದನೆ. ಮುಂದಕ್ಕೂ ಬಿಎಸ್ಪಿ ಪಕ್ಷ ತಮ್ಮ ಜೊತೆಗಿರುತ್ತದೆ ಎಂದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಕಾಂತಪ್ಪ ಅಲಂಗಾರು, ದ.ಕ ಜಿಲ್ಲಾ ಉಸ್ತುವಾರಿ ಗೋಪಾಲ್ ಮುತ್ತೂರು, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಉಸ್ತುವಾರಿ ಲೋಕೇಶ್ ಮೊದಲಾದವರು ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೂ ಸಾಮಾಜಿಕ ನ್ಯಾಯ ಕೊಡುವಲ್ಲಿ ಕೇಂದ್ರ- ರಾಜ್ಯ ಸರಕಾರಗಳು ವಿಫಲವಾಗಿದೆ ಎಂದರು.
ಪಕ್ಷದ ಮುಖಂಡರಾದ ಗಣೇಶ್ ಕಾಂಚಾನ್, ಪ್ರವೀಣ್, ಅನಂತ್, ಚಿದಾನಂದ, ರಾಜೇಶ್,ಅನಂತ್ ರಮೇಶ್ ಪ್ರವೀಣ್, ಪ್ರಶಾಂತ್ ಹಾಗೂ ಶಿಕ್ಷಕ ಚಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.