ಬೆಳ್ತಂಗಡಿ; ತಾಲೂಕಿನಲ್ಲಿ ಟಿ.ಬಿ ಸೆಂಟರ್ನಲ್ಲಿ 200 ಬೆಡ್ಡ್ಗಳು ಕಾರ್ಯನಿರ್ವಹಿಸುತ್ತಿದ್ದು, ಧರ್ಮಸ್ಥಳದಲ್ಲಿ ಮತ್ತೆ 400 ಬೆಡ್ಡ್ಗಳು ತರಾಯಾಗಿದೆ. ಮುಂದಕ್ಕೆ ಹೋಬಳಿ ಮಟ್ಟದಲ್ಲಿ ಕೇರ್ ಸೆಂಟರ್ ಗಳನ್ನು ತೆರೆಯುವ ವೇಳೆ ನಿಮ್ಮ ನಿಯೋಗ ನೀಡಿರುವ ಮದರಸಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಶಾದಿಮಹಲ್ ಗಳ ಪಟ್ಟಿಯನ್ನು ಪರಿಗಣಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ಭರವಸೆ ವ್ಯಕ್ತಪಡಿಸಿದರು.
ಬೆಳ್ತಂಗಡಿ ತಾಲೂಕಿನ ಸುನ್ನೀ ಮಸ್ಜಿದ್ ಮತ್ತು ಮದರಸಗಳ ಫೆಡರೇಶನ್ ನಿಯೋಗ ಶಾಸಕರನ್ನು ಶನಿವಾರ ಪ್ರವಾಸಿ ಬಂಗಲೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿತು.
ತಾಲೂಕಿನ ಒಟ್ಟು 12 ಮದರಸ ಸಭಾಂಗಣ, ಒಂದು ಶಾದಿ ಮಹಲ್, ಮೂರು ಶಿಕ್ಷಣ ಸಂಸ್ಥಗಳಲ್ಲಿ ಯಾವುದನ್ನು ಬೇಕಾದರೂ ಸರಕಾರ ಆದ್ಯತೆಯ ನೆಲೆಯಲ್ಲಿ ವ್ಯವಸ್ಥೆ ರೂಪಿಸಲು ಬಳಸಿಕೊಳ್ಳಬಹುದು ಎಂದು ಶಾಸಕರ ಗಮನಸೆಳೆಯಲಾಯಿತು.ಈ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ಆಯಾಯಾ ಸಮುದಾಯದ ಮುಖಂಡರ ಪ್ರಭಾವಲಯದಲ್ಲಿ ಸಹಕಾರ ದೊರೆತಾಗ ತಾಲೂಕನ್ನು ಕೋವಿಡ್ ಮುಕ್ತವಾಗಿಸಬಹುದು. ಆ ನಿಟ್ಟಿನಲ್ಲಿ ಮುಸ್ಲಿಂ ಬಾಂಧವರ ಈ ಸಹಕಾರ ಶ್ಲಾಘನೀಯ. ಎಲ್ಲರೂ ಜೊತೆ ಸೇರಿ ಹೋರಾಡೋಣ. ಈಗಾಗಲೇ ಇರುವ ಆಂಬುಲೆನ್ಸ್, ಕೇರ್ ಸೆಂಟರ್ ಗಳನ್ನು ಶ್ರಮಿಕ ಸಹಾಯವಾಣಿ ಮೂಲಕ ನಿಮ್ಮ ಸಮುದಾಯದವರೂ ಬಳಸಿಕೊಳ್ಳುವಂತಾಗಬೇಕು ಎಂದರು.
ಗೇರುಕಟ್ಟೆ ಮನ್ಶರ್ ಕೇಂದ್ರವನ್ನು ಬಳಸುವ ಬಗ್ಗೆ ಮಾತುಕತೆ ಆಗಿದೆ. ಇದು ಉಪ್ಪಿನಂಗಡಿ ವರೆಗೂ ಪ್ರಯೋಜನವಾಗಲಿದೆ. ಆದ್ಯತೆಯ ನೆಲೆಯಲ್ಲಿ ಕೆಲಸ ನಡೆಯಲಿದೆ ಎಂದರು.
ಶಾಸಕರ ಭೇಟಿಯ ನಿಯೋಗದಲ್ಲಿ ಫೆಡರೇಶನ್ ಪ್ರಮೋಟರ್ಗಳಾದ ನವಾಝ್ ಶರೀಫ್ ಕಟ್ಟೆ, ಅಶ್ರಫ್ ಆಲಿಕುಂಞಿ ಮುಂಡಾಜೆ, ಅಬ್ಬೋನು ಮದ್ದಡ್ಕ, ರಝಾಕ್ ಕನ್ನಡಿಕಟ್ಟೆ, ಎಂ. ಜಿ ತಲ್ಹತ್ ಸವಣಾಲು, ಎಂ.ಶರೀಫ್ ಬೆರ್ಕಳ ಮತ್ತು ಸಾಲಿ ಮದ್ದಡ್ಕ ಇವರು ಉಪಸ್ಥಿತರಿದ್ದರು.
------
30 ಕ್ಕಿಂತ ಹೆಚ್ಚು ಪ್ರಕರಣವುಳ್ಳ ಗ್ರಾಮ ಪಂಚಾಯತಿಗಳ ಪಿಡಿಒ ಜೊತೆ ಸಭೆ ನಡೆಸಲಾಗುವುದು. ಕೇವಲ ವೈದ್ಯರು, ಆಶಾ ಕಾರ್ಯಕರ್ತೆಯರ ಮೇಲೆ ಮಾತ್ರ ಹೊರೆ ಹೊರಿಸದೆ ಎಲ್ಲಾ ಗ್ರಾ.ಪಂ ಸದಸ್ಯರುಗಳೂ ಕೂಡ ಇದರಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುವುದು. ಕೋವಿಡ್ ಖಚಿತಗೊಂಡಿರುವವರು ಕನಿಷ್ಠ ಅಕ್ಕಪಕ್ಕದ ಮನೆಗೂ ಹೋಗದಂತೆ ಎಚ್ಚರ ವಹಿಸಿದರೆ, ಶಂಕಿತರು ನಿರ್ಲಕ್ಷ್ಯ ವಹಿಸದೆ ಆರಂಭದಲ್ಲೇ ಆಸ್ಪತ್ರೆಗೆ ಬಂದರೆ ಜೀವ ಉಳಿಸಿಕೊಳ್ಳಬಹುದು.
ಹರೀಶ್ ಪೂಂಜ,
ಶಾಸಕರು ಬೆಳ್ತಂಗಡಿ