ಬೆಳ್ತಂಗಡಿ; ಮೈಸೂರಿನ ಸರಕಾರಿ ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ ಸಂಹಿತಾ ಮತ್ತು ಸಿದ್ದಾಂತದಲ್ಲಿ ಅಭ್ಯಾಸ ಪೂರೈಸಿದ ಡಾ. ಆಶಿಕಾ ಗುರುವಾಯನಕೆರೆ ಅವರು ಎಂಡಿ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪೂರ್ತಿಗೊಳಿಸಿದ್ದಾರೆ.
ಕುವೆಟ್ಟು ಗ್ರಾಮದ ಸುನ್ನತ್ಕೆರೆ ಮಸೀದಿ ಬಳಿ ನಿವಾಸಿ, ಚಾಲಕ ಬಿ. ಯೂಸುಫ್ ಮತ್ತು ಜಮೀಲಾ ದಂಪತಿ ಪುತ್ರಿಯಾಗಿರುವ ಡಾ. ಆಶಿಕಾ ಅವರು ಬೆಂಗಳೂರಿನ ಸರಕಾರಿ ಆಯುರ್ವೇದ ಕಾಲೇಜಿನಲ್ಲಿ ಬಿಎಎಮ್ಎಸ್ ವೈದ್ಯ ಪದವಿ ಪೂರ್ತಿಗೊಳಿಸಿದ್ದರು. ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಗುರುವಾಯನಕೆರೆ ಸರಕಾರಿ ಶಾಲೆಗಳಲ್ಲಿ ಪೂರೈಸಿದರೆ, ಪ.ಪೂ ಶಿಕ್ಷಣವನ್ನು ವಾಣಿ ಕಾಲೇಜಿನಲ್ಲಿ ಮುಗಿಸಿದ್ದರು.
ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಅವರು ಕಲಿಕೆಯಲ್ಲಿ ಸಾಧನೆಗಳನ್ನು ದಾಖಲಿಸುತ್ತಾ, ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ಕರ್ನಾಟಕ ಇಲ್ಲಿ 'ಎ ಕಾನ್ಸೆಪ್ಚುವಲ್ ಏಂಡ್ ಎಪ್ಲೈಡ್ ರೀಸರ್ಚ್ ಓನ್ ಟ್ರೈಕಾಲಜಿ' ಎಂಬ ವಿಶೇಷ ಅಧ್ಯಯನ ನಡೆಸಿ ಎಂಡಿ ಪದವಿ ಪೂರೈಸಿದ್ದಾರೆ.ಯೂಸುಫ್- ಜಮೀಲಾ ದಂಪತಿಯ 7 ಮಕ್ಕಳ ಪೈಕಿ ಓರ್ವೆಯಾಗಿರುವ ಡಾ.ಆಶಿಕಾ ಅವರ ಸಹೋದರರಾದ ಅಕ್ರಮ್ ಅವರು ಮಂಗಳೂರಿನ ಕೆಪಿಟಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಡಿಪ್ಲೋಮಾ ಅಧ್ಯಯನ, ಅನ್ಸಾರ್ ಅವರು ಉಜಿರೆ ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್, ಆಕಿಬ್ ಅವರು ಬೆಂಗಳೂರಿನ ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್, ಆದಿಲ್ ಅವರು ಬಿಕಾಂ ಪದವಿ ಪಡೆದುಕೊಂಡಿದ್ದಾರೆ. ಮತ್ತೋರ್ವ ಸಹೋದರ ಅರ್ಷದ್ ಅವರು ಬೆಂಗಳೂರಿನ ಅಲ್ ಅಮೀನ್ ಕಾನೂನು ಮಹಾ ವಿದ್ಯಾಲಯದಲ್ಲಿ ಮೂರನೇ ವರ್ಷದ ಕಾನೂನು ಪದವಿ ಓದುತ್ತಿದ್ದಾರೆ.
ಇದೀಗ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಡಾ.ಆಶಿಕಾ ಅವರ ಪತಿ ಡಾ. ನಿಝಾಮ್ ಅವರೂ ಬಿಎಎಮ್ಎಸ್ ವೈದ್ಯರಾಗಿದ್ದು ಮೈಸೂರಿನಲ್ಲಿ ವೃತ್ತಿನಿರತರಾಗಿದ್ದಾರೆ.