ಬೆಳ್ತಂಗಡಿ; ಲಾಯಿಲ ಹೊಟೇಲ್ ಪಕ್ಕದಲ್ಲಿ ಬಿಹಾರಿ ಮೂಲದ ಮಹಿಳೆಯೊಬ್ಬರು ಕೋವಿಡ್ ದೃಢಪಟ್ಟ ಬಳಿಕವೂ ಬೀಡ ವ್ಯಾಪಾರ ಮಾಡುತ್ತಿದ್ದ ವಿವರ ಅರಿತು ತಹಶಿಲ್ದಾರ್, ಅರೋಗ್ಯ ಇಲಾಖೆ ಮತ್ತು ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ಮಹಿಳೆಯನ್ನು ವಶಕ್ಕೆ ಪಡೆದುಕೊಂಡ ಘಟನೆ ರವಿವಾರ ರಾತ್ರಿ 8. ಗಂಟೆಗೆ ನಡೆದಿದೆ.
ಬಿಹಾರಿ ಮೂಲದ ಮಹಿಳೆ, ಪ್ರಸ್ತುತ ಬೆಳ್ತಂಗಡಿ ಗುರುದೇವ ಕಾಲೇಜು ಬಳಿಯ ಬಾಡಿಗೆ ಬಿಡಾರದಲ್ಲಿ ವಾಸವಾಗಿರುವ ಸೋನಿಯಾ ಸೌಮ್ಯಾ ಎಂಬವರೇ ಇದೀಗ ಸರಕಾರಿ ಆಸ್ಪತ್ರೆ ಕೋವಿಡ್ ವಿಭಾಗಕ್ಕೆ ದಾಖಲಿಸಲ್ಪಟ್ಟವರು.
ಮಹಿಳೆಗೆ ಶುಕ್ರವಾರ ಜ್ವರ ಕಾಣಿಸಿಕೊಂಡಿದ್ದರಿಂದ ಸರಕಾರಿ ಆಸ್ಪತ್ರೆಗೆ ಔಷಧಿಗಾಗಿ ಬಂದಿದ್ದರು. ಈ ವೇಳೆ ನಿಯಮಾನುಸಾರ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ರೇಪಿಡ್ ಟೆಸ್ಟ್ ನಲ್ಲಿ ಕೋವಿಡ್ ದೃಢಪಟ್ಟಿತ್ತು. ಆ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೋವಿಡ್ ಕೇರೆ ಸೆಂಟರ್ಗೆ ವರ್ಗಾಯಿಸುವ ಬಗ್ಗೆ ಮಾತನಾಡಿದಾಗ ಆಕೆ, ತನಗೆ ಸಣ್ಣ ಮಕ್ಕಳಿದ್ದು ಮನೆಯಲ್ಲೇ ಉಳಿಯುವುದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಬಳಿ ತಿಳಿಸಿದ್ದರು. ಅಂತೆಯೇ ಅವರಿಗೆ ಅನುಮತಿ ನೀಡಲಾಗಿತ್ತು. ಅವರ ಪ್ರಾಥಮಿಕ ಸಂಪರ್ಕದ ಹಿನ್ನೆಲೆಯಲ್ಲಿ ಶನಿವಾರ ಅವರ ಮಕ್ಕಳ ಕೋವಿಡ್ ಪರೀಕ್ಷೆ ಕೈಗೊಳ್ಳಲಾಗಿದ್ದು, ಅವರ ವರದಿ ಬಂದ ಬಳಿಕ ಎಲ್ಲರನ್ನೂ ಒಟ್ಟಿಗೆ ಲಾಯಿಲದ ಕೋವಿಡ್ ಕೇರ್ ಸೆಂಟರ್ಗೆ ವರ್ಗಾಯಿಸುವ ಯೋಚನೆಯನ್ನು ಇಲಾಖೆಯವರು ಮಾಡಿದ್ದರು.
ಈಮಧ್ಯೆ ಆಕೆ ರವಿವಾರ ಇದ್ದಕ್ಕಿದ್ದಂತೆ ಲಾಯಿಲದ ಹೊಟೇಲ್ ಬಳಿ ಇರುವ ತನ್ನ ಅಂಗಡಿ ತೆರೆದು ವ್ಯಾಪಾರ ಮಾಡಿದ್ದರು. ವಿಚಾರ ಅರಿತು ಸ್ಥಳಕ್ಕೆ ತಹಶಿಲ್ದಾರ್ ಮಹೇಶ್ ಜೆ, ಕಂದಾಯ ನಿರೀಕ್ಷಕ ಪ್ರತೀಷ್, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಗಿರೀಶ್ ಮತ್ತು ಸೋಮನಾಥ ಇವರು ಆಗಮಿಸಿ ಮಹಿಳೆಯ ವ್ಯಾಪಾರ ಮಳಿಗೆ ಮುಚ್ಚಿಸಿ ಆಕೆಯನ್ನು ಸರಕಾರಿ ಆಸ್ಪತ್ರೆಯ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋದರು.
ಈ ವೇಳೆ ಲಾಯಿಲ ಗ್ರಾ.ಪಂ ಉಪಾಧ್ಯಕ್ಷ ಗಣೇಶ್ ಆರ್, ಸದಸ್ಯ ದಿನೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಟೆಸ್ಟ್ ವೇಳೆ ಸುಳ್ಳು ಹೆಸರು ಹೇಳಿದ್ದ ಮಹಿಳೆ;
ಆರಂಭದಲ್ಲಿ ಕೋವಿಡ್ ಪರೀಕ್ಷೆ ನಡೆಸುತ್ತೇವೆ ಎಂದಾಗ ಮಹಿಳೆ ಆಸ್ಪತ್ರೆಯವರ ಬಳಿ ಸುಳ್ಳು ಹೆಸರು ನೀಡಿ ಯಾಮಾರಿಸಿದ್ದರೆಂದು ತಿಳಿದು ಬಂದಿದೆ. ಮೊಬೈಲ್ ನಂಬರ್ ಕೂಡ ಇಲ್ಲ ಎಂದು ಆರಂಭದಲ್ಲಿ ತಿಳಿಸಿದ್ದ ಆಕೆ ಬಳಿಕ ಇಲಾಖೆಯವರು ನಂಬರ್ ಪಡೆದು ಅವರ ಅಂಗಳದಿಂದಲೇ ಕರೆ ಮಾಡಿದಾಗ ಮನೆಯೊಳಗೆ ಮೊಬೈಲ್ ರಿಂಗಿಣಿಸಿತ್ತು. ಅವರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮಕ್ಕಳನ್ನು ಪರೀಕ್ಷೆ ನಡೆಸಲೆಂದು ಆರೋಗ್ಯ ಇಲಾಖೆ ತಂಡ ಶನಿವಾರ ಅವರ ಮನೆಗೆ ಹೋಗಿದ್ದ ವೇಳೆ ಸಾಕಷ್ಟು ಅಸಹಕಾರ ನೀಡಿದ್ದು, ಮಹಿಳೆಯ ಮನೆಯಲ್ಲಿ ಮೂರು ಮಂದಿಯ ಗಂಟಲು ದ್ರವ ಸಂಗ್ರಹಿಸಲು ಮೂರು ಗಂಟೆ ಸಮಯ ತೆಗೆದುಕೊಳ್ಳುವಂತೆ ಮಾಡಿದ್ದರು ಎಂದು ಆರೋಗ್ಯ ಇಲಾಖೆಯವರು ದೂರಿದ್ದಾರೆ.
ಪಕ್ಕದ ಹೊಟೇಲ್ ಮುಚ್ಚಿಸಿದ ಅಧಿಕಾರಿಗಳು;
ಮಹಿಳೆ ವ್ಯಾಪಾರ ಮಾಡಿದ್ದ ಸ್ಥಳದ ಪಕ್ಕದ ಹೊಟೇಲ್ ಅನ್ನೂ ತಹಶಿಲ್ದಾರ್ ಅವರ ಸೂಚನೆ ಮೇರೆಗೆ ಮುಚ್ಚಿಸಲಾಯಿತು. ಸೋಮವಾರ ನಿಯಮದಂತೆ ಕೋವಿಡ್ ಪರೀಕ್ಷೆ ನಡೆಸಿಕೊಂಡು ಬಳಿಕ ತೆರೆಯುವಂತೆ ಅಧಿಕಾರಿಗಳು ಸೂಚನೆ ನೀಡಿದರು. ಹೊಟೇಲ್ ನಲ್ಲಿ ಆಹಾರ ಪದಾರ್ಥಗಳು ಬೇಯಿಸಿಡಲಾಗಿದ್ದು ಮಾಲಿಕರಿಗೆ ಭಾರೀ ನಷ್ಟ ಉಂಟಾಯಿತು.
ಸಂಕಷ್ಟದಲ್ಲಿರುವ ಕುಟುಂಬ;
ಮಹಿಳೆ ಸೋನಿಯಾ ಅವರಿಗೆ ನಾಲ್ಕು ಹೆಣ್ಣು ಮತ್ತು ಒಂದು ಗಂಡು ಮಗುವಿದೆ. ಪತಿ ಅತಿಯಾದ ಮಧ್ಯ ವ್ಯಸನಿಯಾಗಿದ್ದು ಬಸ್ಟ್ಯಾಂಡ್ ಪರಿಸರದಲ್ಲಿ ಬಿದ್ದುಕೊಂಡಿರುವುದು ಸಾಮಾನ್ಯವಾಗಿದೆ. ಮಹಿಳೆ ಇದೇ ಬೀಡ ಅಂಗಡಿಯಲ್ಲಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ ಎಂದೂ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದೀಗ ಆಕೆ ಕೋವಿಡ್ ಕೇರ್ ಸೆಂಟರ್ ಗೆ ತೆರಳುವುದು ಅನಿವಾರ್ಯವಾಗಿದ್ದು ಸಮಸ್ಯೆ ಎದುರಾಗಿದೆ.
ಕೋವಿಡ್ ಸಂಖ್ಯೆ ಏರಿಕೆ: ನಿಯಮಾವಳಿ ಮರೆತ ಜನ
ತಾಲೂಕಿನಲ್ಲಿ ಮತ್ತೆ ಕೋವಿಡ್ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಜನ ಅನ್ಲಾಕ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಯಾಗಿ ನಡೆದುಕೊಳ್ಳುತ್ತಿದ್ದಾರೆ.
ಅಂತರ, ಮಾಸ್ಕ್ ಎಲ್ಲವನ್ನೂ ಮರೆತು ಮೈಮರೆಯುತ್ತಿದ್ದಾರೆ.
ಆರೋಗ್ಯ ಇಲಾಖೆ ಸಿಬ್ಬಂದಿ ರಾತ್ರಿಹಗಲೆನ್ನದೇ ಕೋವಿಡ್ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿದ್ದರೆ ಜನರ ಅಸಹಕಾರ ಬೇಸರ ಹುಟ್ಟಿಸಿದೆ. ಹೀಗೇ ಸ್ಥಿತಿ ಮುಂದುವರಿದರೆ ಸಧ್ಯದಲ್ಲೇ ಪೂರ್ಣ ಲಾಕ್ಡೌನ್ ಆಗುವುದರಲ್ಲಿ ಸಂದೇಹವಿಲ್ಲ.