ಬೆಳ್ತಂಗಡಿ : ರಾಜ್ಯದಲ್ಲಿ ಗೃಹರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಇದೀಗ ರೂಪಾಯಿ 350 / - ದಿನಭತ್ತೆ ನೀಡುತ್ತಿದ್ದು , ವಿವಿಧ ರಕ್ಷಣಾ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದ ಗೃಹರಕ್ಷಕ ದಳದ ಸಿಬ್ಬಂದಿಗಳ ದಿನಭತ್ತೆಯನ್ನು ರೂಪಾಯಿ 750 / -ಕ್ಕೆ ಹೆಚ್ಚಿಸಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಿ . ಎಸ್ . ಯಡಿಯೂರಪ್ಪರನ್ನು ಜುಲೈ 9 ರಂದು ಭೇಟಿಯಾದ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಮನವಿ ಗೃಹರಕ್ಷಕ ಸಿಬ್ಬಂದಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
ರಾಜ್ಯದಲ್ಲಿ ಒಟ್ಟು 25,000 ಕ್ಕೂ ಅಧಿಕ ಗೃಹರಕ್ಷಕ ದಳದ ಸಿಬ್ಬಂದಿಗಳಿದ್ದು , ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,000 ಮಂದಿ ವಿವಿಧ ಇಲಾಖೆಗಳಲ್ಲಿ ಕರ್ತವ್ಯದಲ್ಲಿದ್ದಾರೆ.
ಅವುಗಳಲ್ಲಿ ಪ್ರಮುಖವಾಗಿ ಅಗ್ನಿಶಾಮಕದಳ, ಆರ್ಟಿಒ, ಕರಾವಳಿ ಪೊಲೀಸ್ ಪಡೆ, ಪ್ರವಾಹ ರಕ್ಷಣಾ ಕಾರ್ಯ, ಪೊಲೀಸ್ ಠಾಣೆ, ಟ್ರಾಫಿಕ್ ಠಾಣೆ ಇತ್ಯಾಧಿ ಪ್ರಮುಖ ಇಲಾಖೆಗಳಲ್ಲಿ, ಸರಕಾರಿ ಸೇವೆಯಲ್ಲಿರುವ ಉದ್ಯೋಗಿಗಳಿಗೆ ಸಮಾನವಾಗುವಂತೆಯೂ ಕೆಲವೆಡೆ ಗೃಹರಕ್ಷಕ ದಳದ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ.
ಕಳೆದ ಎಪ್ರಿಲ್ 29 ರಿಂದ ಜೂನ್ ತಿಂಗಳಾಂತ್ಯದವರೆಗೆ ಕೋವಿಡ್ ನಿಯಂತ್ರಣ ಕಾರ್ಯದಲ್ಲೂ ರಾಜ್ಯದ ಗೃಹರಕ್ಷಕ ದಳದ ಸಿಬ್ಬಂದಿಗಳಿಂದ ಸರಕಾತ ಅಮೋಲಾಗ್ರ ಸೇವೆ ಪಡೆದಿದೆ. ಈವಿಚಾರವನ್ನು ಮನದಟ್ಟಾಗುವಂತೆ ಮನವಿಯಲ್ಲಿ ನಮೂದಿಸಿರುವ ಶಾಸಕ ಹರೀಶ್ ಪೂಂಜ, ರಾಜ್ಯ ಸರಕಾರ ಈಗಾಗಲೇ ವಿವಿಧ ಶ್ರಮಿಕ ವರ್ಗಕ್ಕೆ ಕೋವಿಡ್ ಪರಿಹಾರವಾಗಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು , ರಾಜ್ಯದ ಗೃಹರಕ್ಷಕ ದಳದ ಸಿಬ್ಬಂದಿಗಳು ಈ ಸೌಲಭ್ಯದಿಂದಲೂ ವಂಚಿತರಾಗಿದ್ದಾರೆ . ಅಂತಹ ಗೃಹರಕ್ಷಕದಳದ ಸಿಬ್ಬಂದಿಗಳಿಗೆ ದಿನಭತ್ತೆ ಹೆಚ್ಚಿಸುವುದರ ಜೊತೆಗೆ ಸರಕಾರ ವಿಶೇಷ ಪ್ಯಾಕೇಜ್ ಕೂಡಾ ಘೋಷಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಬಿ . ಎಸ್ . ಯಡಿಯೂರಪ್ಪ ಅವರು ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತವಾದ ನಿರ್ಧಾರಕ್ಕೆ ಬರಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.