ಬೆಳ್ತಂಗಡಿ; ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸಿಪಾಯಿಯಾಗಿ ಕರ್ತವ್ಯ ನಿರ್ವಹಿಸಿದ ಧರ್ಮಸ್ಥಳ ಕನ್ಯಾಡಿ|| ಗ್ರಾಮದ ಪುಡ್ಕೆತ್ತು ನಿವಾಸಿ ಸುಧಾಕರ ಗೌಡ ಅವರು ಜ.31 ರಂದು ಸೇನೆಯಿಂದ ನಿವೃತ್ತಿ ಹೊಂದಿದ್ದಾರೆ.
ಪುಡ್ಕೆತ್ತು ನಿವಾಸಿ ಧರ್ಮಸ್ಥಳ ಮಂಡಲ ಪಂಚಾಯತ್ ಮಾಜಿ ಪ್ರಧಾನರು ಹಾಗೂ ಪ್ರಸ್ತುತ ಕೃಷಿಕರಾಗಿರುವ ಸುಂದರ ಗೌಡ ಮತ್ತು ವಿಶಾಲಾಕ್ಷಿ ದಂಪತಿ ಪುತ್ರರಾಗಿರುವ ಸುಧಾಕರ ಗೌಡ ಅವರು 2004 ರಿಂದ 2021 ರವರೆಗೆ ಒಟ್ಟು 17 ವರ್ಷಗಳಲ್ಲಿ ದೇಶಸೇವೆಗೈದು ಇದೀಗ ನಿವೃತ್ತರಾಗಿ ಊರಿಗೆ ಮರಳುವವರಿದ್ದಾರೆ.
ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಧರ್ಮಸ್ಥಳ ಕನ್ಯಾಡಿ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಉಜಿರೆ ಎಸ್ಡಿಎಂ ಸೆಕೆಂಡರಿ ಶಾಲೆಯಲ್ಲಿ ಪೂರ್ತಿಗೊಳಿಸಿ, ನೆಲ್ಯಾಡಿಯ ಬೆಥನಿ ಸಂಸ್ಥೆಯಲ್ಲಿ ಐಟಿಐ ಓದುತ್ತಿರುವ ವೇಳೆ ಮಂಗಳೂರಿನಲ್ಲಿ ನಡೆದಿದ್ದ ಸೇನಾ ನೇಮಕಾತಿ ಶಿಬಿರದಲ್ಲಿ ಭಾಗವಹಿಸಿ ಅವರು ಸೇನೆಗೆ ಆಯ್ಕೆಯಾಗಿದ್ದರು.
ಆರ್ಮಿ ಸರ್ವಿಸ್ ಕಾರ್ಪ್ಸ್ ( ಎಎಸ್ಸಿ) ನಲ್ಲಿ ಸಿಪಾಯಿಯಾಗಿ ಜಮ್ಮು ಕಾಶ್ಮೀರದ ರಜೋರಿ, ಕಾರ್ಗಿಲ್, ಹರ್ಯಾಣ, ದೆಹಲಿ, ರಾಜಸ್ಥಾನ ಮತ್ತು ಕಲ್ಕತ್ತಾದಲ್ಲಿ ಸೇವೆ ಸಲ್ಲಿಸಿದ್ದಾರೆ.
ಇವರ ಸಹೋದರಿ ಗಾಯತ್ರಿ ದಿನೇಶ್ ಗೌಡ ಅವರು ಗ್ರಾ.ಪಂ ಪಿಡಿಒ ಆಗಿದ್ದು ಇನ್ನೋರ್ವ ಸಹೋದರ ಸುದರ್ಶನ ಗೌಡ ಅವರು ಸುವರ್ಣ ವಾಹಿನಿಯ ಕಾರ್ಯಕ್ರಮ ಮುಖ್ಯಸ್ಥರಾಗಿ ಬೆಂಗಳೂರಿನಲ್ಲಿ ಕರ್ತವ್ಯದಲ್ಲಿದ್ದಾರೆ.