ಬೆಳ್ತಂಗಡಿ; ಕಕ್ಕಿಂಜೆಯ ಖಾಸಗಿ ಆಸ್ಪತ್ರೆಗೆ ಸೇರಿದ ಆಂಬುಲೆನ್ಸ್ ಬೆಳ್ತಂಗಡಿ ಸೇತುವೆ ಬಳಿ ಪಲ್ಟಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಅಪಘಾತದಿಂದಾಗಿ ಆಂಬುಲೆನ್ಸ್ ನಲ್ಲಿದ್ದ ಓರ್ವ ವೈದ್ಯ ಸೇರಿ ಒಟ್ಟು ಮೂವರಿಗೆ ಗಾಯಗಳಾಗಿವೆ ಎಂದು ಮಾಹಿತಿ ಲಭಿಸಿದೆ. ಈ ಪೈಕಿ ವೈದ್ಯ ಡಾ.ನಿತಿನ್ ಅವರಿಗೆ ಕೈಯ್ಯ ಮೂಳೆಮುರತಕ್ಕೊಳಗಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಾದ
ಇನ್ನಿಬ್ಬರು ಆಸ್ಪತ್ರೆಯ ಸಿಬ್ಬಂದಿಗಳಾದ ರಿತೇಶ್ ಮತ್ತು ಹುಝೈರ್ ಎಂಬವರೆಂದು ಗೊತ್ತಾಗಿದೆ. ಈ ಪೈಕಿ ಹುಝೈರ್ ವಾಹನ ಚಲಾಯಿಸುತ್ತಿದ್ದರು ಎಂಬುದು ಪ್ರಾಥಮಿಕ ಮಾಹಿತಿ. ಇವರಿಬ್ಬರೂ ಕೂಡ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅಂಬುಲೆನ್ಸ್ ನ ಚಾಲಕ ಬೇರೆಯೇ ಇದ್ದು, ಇವರು ಮೆಡಿಸಿನ್ ಪಾರ್ಸೆಲ್ ವಿಚಾರವಾಗಿ ವಾಹನದಲ್ಲಿ ಬೆಳ್ತಂಗಡಿಗೆ ಬಂದಿದ್ದರು ಎಂದು ಗೊತ್ತಾಗಿದೆ. ಅಪಘಾತದ ಕಾರಣಕ್ಕೆ ಬೊಲೆರೋ ಅಂಬುಲೆನ್ಸ್ ವಾಹನ ಬಹುತೇಕ ನುಜ್ಜುಗುಜ್ಜಾಗಿದೆ.
ಘಟನೆಯಿಂದ ಸುಮಾರು ಅರ್ಧ ತಾಸು ಟ್ರಾಫಿಕ್ ಜಾಮ್ ಕೂಡ ಉಂಟಾಯಿತು. ತಕ್ಷಣ ಸ್ಪಂದಿಸಿದ ಬೆಳ್ತಂಗಡಿ ಟ್ರಾಫಿಕ್ ಪೊಲೀಸರು ನಾಗರಿಕರ ಸಹಕಾರದಿಂದ ಅಗತ್ಯ ಕಾರ್ಯಾಚರಣೆ ನಡೆಸಿದ್ದಾರೆ.