ಬೆಳ್ತಂಗಡಿ; ಕೂಲಿ ಕಾರ್ಮಿಕನಾಗಿದ್ದು ಏ.3 ರಂದು ನೆರೆ ಮನೆಯ ನೀರಿನ ಟ್ಯಾಂಕ್ ಸ್ವಚ್ಚತೆಗೆಂದು ಹೋಗಿದ್ದವರು ನೀರಿನಲ್ಲಿ ಮುಳುಗಿ ಅಸಹಜವಾಗಿ ಸಾವನ್ನಪ್ಪಿದ ಘಟನೆ ಕೊಯ್ಯೂರು ಗ್ರಾಮದ ಅತ್ಯಾರ ಎಂಬಲ್ಲಿ ನಡೆದಿದೆ.
ಮೃತರನ್ನು ಅತ್ಯಾರ ಮನೆ ನಿವಾಸಿ ಶ್ರೀಧರ ಗೌಡ ಎಂಬವರೆಂದು ಗುರುತಿಸಲಾಗಿದೆ.
ಮೃತರ ಪತ್ನಿ ನಳಿನಿ ಪೊಲೀಸ್ ದೂರು ನೀಡಿದ್ದಾರೆ.
ಶ್ರೀಧರ ಗೌಡ ಅವರು ಕೂಲಿ ಕೆಲಸ ಮಾಡಿಕೊಂಡಿದ್ದು ಏ.3 ರಂದ ಅಪರಾಹ್ನ 3ಗಂಟೆಗೆ ಕೊಯ್ಯೂರು ಗ್ರಾಮದ ಬಜಿಲ ನಿವಾಸಿ, ನೆರೆಯ ಹಾಗೂ ಸಂಬಂದಿಕರೂ ಆಗಿರುವ ಚಂದಪ್ಪ ಗೌಡ ಅವರ ಮನೆಯ ಬಳಿಯ ನೀರಿನ ಟ್ಯಾಂಕ್ ಸ್ವಚ್ಯಮಾಡಲು ಹೋಗಿದ್ದರು. ಸಂಜೆಯಾದರು ಪತಿ ಮರಳಿ ಬಾರದ ಕಾರಣ ಚಂದಪ್ಪ ಗೌಡರ ಮನೆಗೆ ಹೋಗಿ ಅವರ ಮಗ ಚೇತನನಲ್ಲಿ ವಿಚಾರಿಸಿದಾಗ, ಶ್ರೀಧರ ಗೌಡರು ಕೆಲಸ ಮಾಡುತ್ತಿರುವ ನೀರಿನ ಟ್ಯಾಂಕನ ಬಳಿ ಸಂಜೆ 6 ಗಂಟೆಗೆ ಹೋಗಿ ನೋಡಿದಾಗ ಶ್ರೀಧರ ಗೌಡರು ಟ್ಯಾಂಕಿಯ ನೀರಿನಲ್ಲಿ ಅರ್ಧ ಮುಳುಗಿದ್ದು ಕಂಡು ಬೊಬ್ಬೆ ಹೊಡೆದಾಗ ನೆರೆಕರೆಯವರು ದಾವಿಸಿ ಬಂದರು. ಬಳಿಕ ಅವರನ್ನು ನೀರಿನಿಂದ ಮೇಲಕ್ಕೆತ್ತಿ ಚಿಕಿತ್ಸೆಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ತಂದಿದ್ದು ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿ ಅವರು ಮೃತ ಪಟ್ಟಿರುವುದಾಗಿ ಘೋಷಿಸಿದ್ದಾರೆ.