ಬೆಳ್ತಂಗಡಿ: ಉಜಿರೆಯ ವಿವಿದೋದ್ಧೇಶ ಮಹಿಳಾ ಸಹಕಾರಿ ಸಂಘದಲ್ಲಿ ಗ್ರಾಹಕರು ಸಾಲಕ್ಕಾಗಿ ಅಡವಿಟ್ಟ ಚಿನ್ನಾಭರಣವನ್ನು ಸಂಘದ ನೌಕರನೋರ್ವ ಖಾಸಗಿ ಫೈನಾನ್ಸ್ನಲ್ಲಿ ಅಡವಿಟ್ಟು ಸಾಲ ಪಡೆದು ದುರುಪಯೋಗ ಮಾಡಿದ ಘಟನೆ ಇತ್ತೀಚೆಗೆ ನಡೆದಿದ್ದು, ಇದೀಗ ಗಿರವಿ ಇಟ್ಟ ಎಲ್ಲಾ ಚಿನ್ನಾಭರಣಗಳನ್ನು ಆತನಿಂದಲೇ ಹಣ ಕಟ್ಟಿಸಿ ಸಂಸ್ಥೆಗೆ ಮರಳಿ ಜಮೆ ಮಾಡಿಕೊಳ್ಳಲಾದ ಘಟನೆಯೊಂದು ಬಹಿರಂಗಗೊಂಡಿದೆ.
ಸದ್ರಿ ಸಹಕಾರಿ ಸಂಘದ ಖಾಯಂ ನೌಕರ, ಇತ್ತೀಚಿಗಿನ ಕೆಲ ಸಮಯದಿಂದ ಸಿಇಒ ಅವರ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನದಲ್ಲಿ ಪ್ರಭಾರ ಮೆನೇಜರ್ ಕೂಡ ಆಗಿದ್ದ ವ್ಯಕ್ತಿಯೇ ಈ ರೀತಿ ನಂಬಿಕೆ ದ್ರೋಹ ಮಾಡಿರುವ ವ್ಯಕ್ತಿ.
ಮಹಿಳಾ ಸಹಕಾರಿ ಸಂಘದಲ್ಲಿ ಚಿನ್ನಾಭರಣದ ಸಾಲದ ವ್ಯವಸ್ಥೆಯಿದೆ. ಸಾಧಾರಣ ಮಟ್ಟಿಗೆ ವ್ಯವಹಾರವೂ ಚಾಲ್ತಿಯಲ್ಲಿತ್ತು. ಹಲವು ಮಂದಿ ಗ್ರಾಹಕರು ಸಂಘದಲ್ಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದಿದ್ದರು. ಗ್ರಾಹಕರು ಅಡವಿಟ್ಟ ಚಿನ್ನದ ಆಭರಣವನ್ನು ಇದೇ ಸಿಬ್ಬಂದಿಯ ಕೈಯ್ಯಲ್ಲೇ ಕೀಲಿಕೈ ಕೂಡ ಬರುವುದರಿಂದ ಸದ್ರಿ ವ್ಯಕ್ತಿ ಅಲ್ಲಿಂದ ಚಿನ್ನವನ್ನು ಪಡೆದು ಅದನ್ನು ತನಗೆ ಪರಿಚಯ ಇರುವ ಖಾಸಗಿ ಫೈನಾನ್ಸ್ನಲ್ಲಿ ಅಡವಿಟ್ಟು ಹೆಚ್ಚಿನ ಸಾಲ ಪಡೆದುಕೊಂಡು ಸ್ವಂತಕ್ಕೆ ಬಳಸಿಕೊಂಡಿದ್ದ. ಗ್ರಾಹಕರು ಸಾಲವನ್ನು ಪಾವತಿಸಲು ಬಂದಾಗ ಈ ನೌಕರ ಯಾರಿಗೂ ಗೊತ್ತಾಗದಂತೆ ಖಾಸಗಿ ಫೈನಾನ್ಸ್ಗೆ ಹೋಗಿ ಅವರ ಚಿನ್ನಾಭರಣವನ್ನು ಬಿಡಿಸಿ ತಂದು ಅದನ್ನು ಗ್ರಾಹಕರಿಗೆ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದ. ಆದರೆ ಇತ್ತೀಚೆಗೆ ಸಂಘದ ಆಡಿಟ್ ಕಾರ್ಯ ನಡೆಯುತ್ತಿರುವ ಸಮಯ ವ್ಯವಹಾರ ದಾಖಲೆ ಮತ್ತು ತಮ್ಮ ಸುಪರ್ದಿಯಲ್ಲಿರುವ ಚಿನ್ನಕ್ಕೆ ತಾಳೆ ಬಂದಿರಲಿಲ್ಲ. ಈ ಸಂದರ್ಭ ಪ್ರಕರಣ ಬೆಳಕಿಗೆಬಂದಿತ್ತು. ಅಧಿಕಾರಿಗಳ ಆಂತರಿಕ ತನಿಖೆಯ ವೇಳೆ ವಿಚಾರ ಒಪ್ಪಿಕೊಂಡ ನೌಕರ ಯಾವುದೇ ಪ್ರಾಯಶ್ಚಿತ್ತಕ್ಕೂ ಸಿದ್ಧವಾಗಿದ್ದ. ಈ ಸಂಬಂಧ ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಗಿತ್ತು. ಎಲ್ಲರೂ ಜೊತೆ ಮಾತುಕತೆ ನಡೆಸಿದ ನಂತರ ಸದ್ರಿ ಆರೋಪ ಹೊತ್ತಿರುವ ವ್ಯಕ್ತಿ ಆರೋಪಿ, ತಾನು ಪಡೆದ ಸಾಲಕ್ಕೆ ತನ್ನ ಜಾಗವನ್ನು ಅಡವಿಟ್ಟು ಮೊತ್ತ ತುಂಬುವ ಭರವಸೆ ನೀಡಿ, ಇದೀಗ ಅದಕ್ಕೆ ಕ್ರಮಕೈಗೊಂಡು ಫೈನಾನ್ಸ್ ನಲ್ಲಿ ಅಡವಿಟ್ಟ ಎಲ್ಲಾ ಚಿನ್ನಾಭರಣವನ್ನು ಮರಳಿ ಸಹಕಾರಿ ಸಂಘದ ಲಾಕರ್ ಗೆ ತಂದಿರಿಸಲಾಗಿದೆ.
ಸಿಬ್ಬಂದಿ ತಪ್ಪೆಸಗಿದರೂ ಆತನ ಭವಿಷ್ಯದ ಹಿತದೃಷ್ಟಿಯಿಂದ ಅದನ್ನು ಕಾನೂನು ಕಟ್ಟಳೆಯ ಮಾರ್ಗದ ಮೂಲಕ ವಸೂಲಿಗೆ ಇಳಿಯದೆ ಅವರ ಜಾಗವನ್ನು ಅಡಮಾನ ಮಾಡುವ ಮೂಲಕ ಸಂಘದ ಸದಸ್ಯರ ನ್ಯಾಯಕ್ಕೆ ಧಕ್ಕೆಯಾಗದಂತೆ ಕ್ರಮಕೈಗೊಳ್ಳುವ ಮೂಲಕ ವಿವಿದೋದ್ಧೇಶ ಮಹಿಳಾ ಸಹಕಾರಿ ಸಂಘದ ಆಡಳಿತ ಮಂಡಳಿ ಮಹತ್ವದ ಹೆಜ್ಜೆ ಇರಿಸಿದೆ.