ಅಳದಂಗಡಿ ಸನಿಹದ ಸವೇರಾ ಪಿರೇರಾ ಬಂಧಿತ ಆರೋಪಿ
ಬೆಳ್ತಂಗಡಿ: ತನ್ನ ಶತ್ರುಗಳನ್ನು ನಾಶ ಮಾಡುವ ಉದ್ದೇಶದಿಂದ ವಿದ್ಯುತ್ ಕಳ್ಳತನ ಮಾಡಿ ಅದನ್ನು ತಂತಿಯ ಮೂಲಕ ತೋಡಿನಲ್ಲಿ ಹರಿಯುವ ನೀರಿಗೆ ಸಂಪರ್ಕ ನೀಡಿ ಸಂಚು ರೂಪಿಸಿದ್ದ ಆರೋಪಿಯನ್ನು ಕೊನೆಗೂ ವೇಣೂರು ಪೊಲೀಸರು ಶುಕ್ರವಾರದಂದು ಬಂಧಿಸಿದ್ದು ಜೈಲಿನ ದಾರಿ ತೋರಿಸಿದ್ದಾರೆ.
ಅಳದಂಗಡಿ ಸಮೀಪದ ಬಡಗಕಾರಂದೂರು ಗ್ರಾಮದ ನಿವಾಸಿ, ಹಲವು ಕ್ರಮಿನಲ್ ಕೃತ್ಯಗಳ ಹಿನ್ನಲೆಯುಳ್ಳ ವ್ಯಕ್ತಿ ಸವೇರಾ ಪಿರೇರಾ ಬಂಧಿತ ಆರೋಪಿ.
ಘಟನೆಯ ವಿವರ;
ಮಳೆಗಾಲ ಆರಂಭವಾದ ಸಂದರ್ಭದಲ್ಲಿ ಅವಿಭಜಿತ ದ.ಕ ಜಿಲ್ಲೆಯಲ್ಲಿ ರಾತ್ರಿ ಸಮಯದಲ್ಲಿ ಗದ್ದೆ , ಕಣಿವೆ, ಹಳ್ಳ , ತೊರೆಗಳಲ್ಲಿ ಮೀನು ಶಿಕಾರಿ ಮಾಡುವ ಪರಿಪಾಠ ಶತಮಾನಗಳಿಂದ ಬಳಕೆಯಲ್ಲಿದೆ. ಇಂತಹ ಸಂದರ್ಭದಲ್ಲಿ ಸವೇರಾ ಪೊರೇರಾ ತನ್ನ ಎದುರಾಳಿಗಳನ್ನು ನಾಶ ಮಾಡುವ ವ್ಯವಸ್ಥಿತವಾಗಿ ಕೊಲೆಮಾಡುವ ಉದ್ಧೇಶದಿಂದ ತನ್ನ ಪಂಪ್ ಶೆಡ್ ನಿಂದ ವಿದ್ಯುತ್ ಕಳ್ಳತನ ಮಾಡಿ, ತಂತಿಗಳ ಮೂಲಕ ಅದನ್ನು ಸಮೀಪದಲ್ಲೇ ಹರಿಯುವ ಹಳ್ಳದ ಹರಿಯುವ ನೀರಿಗೆ ಸಂಪರ್ಕ ನೀಡಿದ್ದಾನೆ. ಇದರ ಅರಿವು ಇಲ್ಲದ ಸ್ಥಳೀಯರು ಮೀನು ಶಿಕಾರಿಗೆ ಹೋಗಿದ್ದಾರೆ. ಅವರಿಗೆ ವಿದ್ಯುತ್ ಆಘಾತವಾಗಿದೆ. ಆದರ ಅದೃಷ್ಟವಶಾತ್ ಯಾವುದೇ ಪ್ರಾಣಪಾಯಗೊಂಡಿಲ್ಲ.
ವಿದ್ಯುತ್ ಆಘಾತಗೊಂಡಿರುವ ಬಗ್ಗೆ ಸ್ಥಳೀಯರು ಮೆಸ್ಕಾಂ ಲೈನ್ ಮೆನ್ ಅವರ ಗಮನಕ್ಕೆ ತಂದು, ಮಳೆಗೆ ವಿದ್ಯುತ್ ತಂತಿ ಕಡಿತಗೊಂಡಿರುವ ಸಾಧ್ಯತೆ ಇದೆ ಎಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಲೈನ್ ಮೆನ್ ಅವರು ಹುಡುಕಾಡಿದಾಗ ಆರೋಪಿ ಸವೇರಾ ಪಿರೇರಾ ಎಂಬಾತ ತನ್ನ ಪಂಪ್ ಶೆಡ್ ನಿಂದ ವಿದ್ಯುತ್ ಕಳ್ಳತನ ಮಾಡಿ ತಂತಿಯ ಮೂಲಕ ಹಳ್ಳಕ್ಕೆ ಸಂಪರ್ಕ ನೀಡಿರುವುದು ಕಂಡು ಬಂದಿತ್ತು. ಅವರು ತಕ್ಷಣ ಅಳದಂಗಡಿ ಮೆಸ್ಕಾಂ ಇಂಜಿನಿಯರ್ ಹಾಗೂ ಬೆಳ್ತಂಗಡಿ ಕಾರ್ಯಪಾಲಕ ಇಂಜಿನಿಯರ್ ಶಿವಶಂಕರ್ ಅವರ ಗಮನಕ್ಕೆ ತಂದಿದ್ದರು. ಬಳಿಕ ಶಿವಶಂಕರ್ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ವಿದ್ಯುತ್ ಕಳ್ಳತನ ಮಾಡಿ ಯಾವುದೋ ದುಶ್ಕ್ರತ್ಯ ನಡೆಸಲು ಸಂಚು ನಡೆಸಿದ್ದು ಖಚಿತಪಡಿಸಿಕೊಂಡು ಘಟನೆ ಬಗ್ಗೆ ಫೋಟೋ , ವಿಡಿಯೋ ಸಮೇತ ವೇಣೂರು ಪೋಲಿಸರಿಗೆ ದೂರು ನೀಡಿದ್ದರು.
ಆತನ ಮೇಲೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗುತ್ತಿರುವಂತೆ ಪೊಲೀಸರಿಗೆ ಸಿಗದೇ ಆರೋಪಿ ತಲೆಮರೆಸಿಕೊಂಡಿದ್ದನು.
ಈಬಮಧ್ಯೆ ಆರೋಪಿಯನ್ನು ಪೊಲೀಸರೇ ರಕ್ಷಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಎಲ್ಲಾ ಬೆಳವಣಿಗೆಗಳ ನಂತರ ಶುಕ್ರವಾರ ಆರೋಪಿಯ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆತನ ಕೃತ್ಯ ಗಂಭೀರ ಸ್ವರೂಪದ್ದಾಗಿದ್ದು, ಆತನನ್ನು ನ್ಯಾಯಾಲಯಕ್ಕೆ ಜಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.