ಬೆಳ್ತಂಗಡಿ; 2020-21 ಸಾಲಿನಲ್ಲಿ ನಡೆಯಲಿರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗವು ಕ್ಷೇತ್ರವಾರು ಮೀಸಲಾತಿ ವಿಂಗಡಿಸಿ ಕರಡು ಪ್ರತಿಯನ್ನು ಪ್ರಕಟಿಸಿದ್ದು, ಇದರಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿರುವ ಒಟ್ಟು 8 ಸ್ಥಾನಗಳ ಪೈಕಿ ಕನಿಷ್ಠ 2 ಕ್ಷೇತ್ರವನ್ನು ಪ.ಜಾ ಮತ್ತು ಪ.ಪಂಗಡಕ್ಕೆ ಮೀಸಲಿರಿಸಬೇಕು ಎಂದು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಶೇಖರ್ ಧರ್ಮಸ್ಥಳ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು, ತಮ್ಮ ಸಮುದಾಯಕ್ಕೆ ಆಗುತ್ತಿರುವ ರಾಜಕೀಯ ಅನ್ಯಾಯದ ಬಗ್ಗೆ ಮಾತನಾಡಿದರು.
ಈಗಿನ ಕರಡು ಪಟ್ಟಿಯಲ್ಲಿ ಬೆಳ್ತಂಗಡಿಯಲ್ಲಿ ನಮ್ಮ ಸಮಾಜ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲದಾಗಿದ್ದು, ಇದನ್ನು ರದ್ದುಗೊಳಿಸಿ ಜನಸಂಖ್ಯಾ ಆಧಾರಿತ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸುವಂತೆ ನಾವು ಒತ್ತಾಯಿಸುತ್ತೇವೆ.
ಈ ಬಗ್ಗೆ ನಮ್ಮ ಸಮಿತಿ ವತಿಯಿಂದ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳಿಗೆ ದ.ಕ. ಜಿಲ್ಲಾಧಿಕಾರಿಯವರ ಮೂಲಕ ದಿನಾಂಕ ಜು.6 ರಂದೇ ಆಕ್ಷೇಪಣೆ ದಾಖಲಿಸಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಸೆಕ್ಷನ್ 162 ರ ಪ್ರಕಾರ ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ಚುನಾವಣಾ ಕ್ಷೇತ್ರಗಳನ್ನು ಆಯಾ ವರ್ಗದ ಜನಸಂಖ್ಯೆಯ ಆಧಾರದಲ್ಲಿ ನಿಗದಿಪಡಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಬೆಳ್ತಂಗಡಿ ತಾಲೂಕಿನಲ್ಲಿ ಈ ವರ್ಗಕ್ಕೆ ಸೇರಿದ ಜನಸಂಖ್ಯೆ ಅತ್ಯಧಿಕವಾಗಿದೆ . ಭೌಗೋಳಿಕವಾಗಿ 81 ಗ್ರಾಮಗಳನ್ನು ಹೊಂದಿರುವ ಬೆಳ್ತಂಗಡಿ ತಾಲೂಕಿನ ಹಲವು ಪ್ರದೇಶಗಳು ಮೂಲ ಸೌಕರ್ಯಗಳಿಂದ ಇನ್ನೂ ವಂಚಿತವಾಗಿವೆ. ಆ ನಿಟ್ಟಿನಲ್ಲಿ ನಮ್ಮ ಸಮುದಾಯಕ್ಕೆ ಮೀಸಲು ನೀಡಿ ಜಿ. ಪಂಚಾಯತ್ ಕ್ಷೇತ್ರವನ್ನು ಒದಗಿಸಬೇಕೆಂದು ವಿನಂತಿಸುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಣ ಜಿ.ಎಸ್, ಸದಸ್ಯರಾದ ರಾಘವ ಕಲ್ಮಂಜ ಮತ್ತು ರಾಮು ಪಡಂಗಡಿ ಉಪಸ್ಥಿತರಿದ್ದರು.