ಬೆಳ್ತಂಗಡಿ; ಕೊಲೆ ಮಾಡುವಂತದ್ದು ಯಾವುದೇ ಮಾನವ ಧರ್ಮದಲ್ಲಿ ಖಂಡನೀಯವಾಗಿರುತ್ತದೆ. ನಾಡಿನ ಸೌಹಾರ್ದತೆಯನ್ನು ಕೆಡಿಸಿ ಕೇವಲ ರಾಜಕೀಯ ಲಾಭಕ್ಕಾಗಿ ಮಾಡುವಂತಹ ಗೂಂಡಾಗಿರಿ,ಕೊಲೆಗಳಂತಹ ಘೋರ ಅಪರಾಧ ಕೃತ್ಯಗಳು ಸಮಾಜವನ್ನು ವಿಭಜಿಸುವುದಲ್ಲದೇ, ಜನರ ನೆಮ್ಮದಿ, ಶಾಂತಿ-ಸೌಹಾರ್ದತೆಯನ್ನು ಕೆಡಿಸುತ್ತದೆ. ಅಂತೆಯೇ ಸುರತ್ಕಲ್ ನ ಜಲೀಲ್ ಅವರನ್ನು ಕೊಲೆ ಮಾಡಿರುವ ಕೃತ್ಯ ಖಂಡನೀಯ. ಅಮಾಯಕನಾಗಿ , ದುಷ್ಕರ್ಮಿಗಳಿಂದ ಕೊಲೆಯಾಗಿರುವ ಕೋಮು ಪ್ರಚೋಧಿತ ಈ ಸಾವಿನಲ್ಲಿ ಪ್ರಾಣ ಬಿಟ್ಟಿರುವ ಜಲೀಲ್ ಕುಟುಂಬಕ್ಕೆ ಈ ಹಿಂದೆ ಕೋಮು ಗಲಭೆಯಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಿದ ಮಾದರಿಯಲ್ಲೇ ಪರಿಹಾರ ಘೋಷಿಸಲಿ ಎಂದು ಮಾಜಿ ಸಚಿವ ಗಂಗಾಧರ ಗೌಡ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಸ್ವಸ್ಥ ಸಮಾಜಕ್ಕಾಗಿ ಮಾನವತಾ ವಾದಿಗಳಾದ ನಾವೆಲ್ಲರೂ ಇದನ್ನು ಕಠಿಣ ಶಬ್ಧಗಳಲ್ಲಿ ಖಂಡಿಸುತ್ತೇವೆ, ಮತ್ತು ಸರಕಾರ ಪರಿಹಾರ ನೀಡುವುದರಲ್ಲಿ ತಾರತಮ್ಯ ಮಾಡಬಾರದು. ಮೃತರ ಕುಟುಂಬಸ್ಥರು ಆರ್ಥಿಕವಾಗಿ ಹಿಂದುಳಿದವರಾಗಿರುವುದರಿಂದ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದಿದ್ದಾರೆ.