ಬೆಳ್ತಂಗಡಿ; ತಾಲೂಕಿನ ರೆಖ್ಯ ಗ್ರಾಮದ ದೇವಸ್ಯ ಎಂಬಲ್ಲಿ ವ್ಯಕ್ತಿಯೊಬ್ಬರನ್ನು ಕಡಿದು ಕೊಲೆ ಮಾಡಲಾದ ಘಟನೆ ರಾತ್ರಿ ನಡೆದಿದೆ.
ಕೊಲೆಯಾದವರನ್ನು ಉದನೆ ಸಮೀಪದ ನೇಲ್ಯಡ ರೆಖ್ಯ ದೇವಸ್ಯ ಎಂಬಲ್ಲಿನ ನಿವಾಸಿ ಸಾಂತಪ್ಪ ಗೌಡ(40) ಎಂಬವರೆಂದು ತಿಳಿದುಬಂದಿದೆ. ಸ್ಥಳೀಯ ಜಯಚಂದ್ರ ಎಂಬಾತ ಕೊಲೆಗೈದವ ಎನ್ನಲಾಗಿದ್ದು ಆತ ಪರಾರಿಯಾಗಿದ್ದಾನೆ ಎಂದು ಆರಂಭಿಕ ಮಾಹಿತಿ ಇದೆ.
ಆಸ್ತಿ ವೈಷಮ್ಯದಲ್ಲಿ ಕೊಲೆಕೃತ್ಯ ನಡೆದಿದೆ ಎಂದು ಹೇಳಲಾಗಿದ್ದು ಹೆಚ್ಚಿನ ಮಾಹಿತಿ ಲಭಿಸಬೇಕಾಗಿದೆ. ಅವಿವಾಹಿತರಾಗಿರುವ ಸಾಂತಪ್ಪ ಗೌಡ ಅವರು ಎಲ್ಐ.ಸಿ ಏಜೆಂಟ್ ಆಗಿಯೂ ಕೆಲಸ ನಿರ್ವಹಿಸುತ್ತಿದ್ದರು. ಕೃಷಿಕರಾಗಿಯೂ ಪರಿಚಿತರಾಗಿದ್ದರು.
ಸ್ಥಳಕ್ಕೆ ಧರ್ಮಸ್ಥಳ ಠಾಣಾ ಸಬ್ ಇನ್ಸ್ಪೆಕ್ಟರ್ ಕೃಷ್ಣಕಾಂತ್ ತೆರಳಿದ್ದಾರೆ. ತನಿಖೆ ಆರಂಭವಾಗಿದೆ. ಸದ್ರಿ ಸ್ಥಳದಲ್ಲಿ ಯಾವುದೇ ಮೊಬೈಲ್ ಗಳು ನೆಟ್ವರ್ಕ್ ಇಲ್ಲದೇ ಇರೂದರಿಂದ ಸಂಪರ್ಕ ಸಾಧ್ಯವಾಗುತ್ತಿಲ್ಲ.ಆರೋಪಿಯ ಪತ್ತೆಗೂ ಇದು ಆರಂಭಿಕ ತೊಡಕುಂಟಾಗುವ ಸಾಧ್ಯತೆ ಇದೆ. ಕಳೆದ ರಾತ್ರಿಯೇ ಆರೋಪಿಯು ಸಾಂತಪ್ಪ ಗೌಡ ಅವರನ್ನು ಕೊಲೆಗೈದಿದ್ದರೂ ಪ್ರಕರಣ ಗುರುವಾರ(ಇಂದು) ತಡವಾಗಿ ಬೆಳಕಿಗೆ ಬಂದಿದೆ.