ಬೆಳ್ತಂಗಡಿ; ಸೋಮವಾರ ಸಂಜೆ ಏಕಾಏಕಿ ಸುರಿದ ಭಾರೀ ಗಾಳಿ ಮತ್ತು ಸಿಡಿಲಿನೊಂದಿಗೆ ಸುರಿದ ಮಳೆಯ ಪರಿಣಾಮ ಮುಂಡಾಜೆ ಸರಕಾರಿ ಉನ್ನತೀಕರಿಸಿದ ಶಾಲೆಯಲ್ಲಿ ಭಾರೀ ಅನಾಹುತ ಸಂಭವಿಸಿದೆ.
ಕೊಳವೆ ಬಾವಿಗೆ ಅಳವಡಿಸಿದ ಪಂಪು ಇರುವ ಪ್ರದೇಶಕ್ಕೆ ಸಿಡಿಲು ಬಡಿದಿರಬಹುದೆಂದು ಅಂದಾಜಿಸಲಾಗಿದ್ದು ಭೂಮಿಯೊಳಗೆ ಅಳವಡಿಸಿದ್ದ ವಯರಿಂಗ್ ಕಿತ್ತು ಬಂದಿದೆ. ಇದರ ಪರಣಾಮವೆಂಬಂತೆ ಆವರಣ ಗೋಡೆ ಸುಮಾರು 70 ಮೀಟರ್ನಷ್ಟು ದೂರಕ್ಕೆ ಕುಸಿದು ಬಿದ್ದಿದೆ. ಶಾಲೆಯ ಕೊಠಡಿಯ ಒಳಗೆ ವಿದ್ಯುತ್ ಮೀಟರ್ ಬಳಿ ಸುಟ್ಟುಹೋಗಿದೆ. ವಯರಿಂಗ್ಗೆ ಹಾನಿಯಾಗಿರುವ ಸಾಧ್ಯತೆ ಇದೆ. ಎಲ್ಲಾ ಕೋಣೆಯ ಬಲ್ಬುಗಳು ಪುಡಿಯಾಗಿದೆ.
ಮುಂಭಾಗದ ಗೇಟಿನ ಬಳಿ ಮರದ ರೆಂಬೆಯೊಂದು ಆವರಣ ಗೋಡೆಮೇಲೆ ಬಿದ್ದು ಅಲ್ಲೂ ಕೌಂಪಾಂಡ್ ಗೆ ಹಾನಿಯಾಗಿದೆ. ಶಾಲಾ ಕೊಠಡಿಯ ಹಿಂದಿನ ಕಿಟಕಿಗಳಿಗೂ ಹಾನಿಯಾಗಿದ್ದು ಗಾಜು ಒಡೆದಿದೆ. ಇದೇ ವೇಳೆ ಶಾಲೆಯಲ್ಲಿ ಮಕ್ಕಳಿದ್ದರೂ ಯಾರಿಗೂ ಅಪಾಯವಾಗಿಲ್ಲ ಎಂಬುದೇ ಸಮಾಧಾನದ ಸಂಗತಿ. ಒಬ್ಬ ಮಗುವಿಗೆ ಮಾತ್ರ ಅಲ್ಪ ಗಾಯವಾಗಿದೆ.
ವಿಚಾರ ಗ್ರಾಮ ಪಂಚಾಯತ್ ಗಮನಕ್ಕೆ ತರಲಾಗಿದ್ದು ಜನಪ್ರತಿನಿಧಿಗಳು ಸ್ಪಂದಿಸಿದ್ದಾರೆ. ಶಾಸಕ ಹರೀಶ್ ಪೂಂಜ ಅವರಿಗೆ ಮಾಹಿತಿ ನೀಡಲಾಗಿದ್ದು ಅವರು ಇಂಜಿನಿಯರ್ರನ್ನು ಕಳಿಸಿ ನಷ್ಟದ ಅಂದಾಜು ಲೆಕ್ಕಹಾಕಿದ್ದಾರೆ.
ಎಲ್ಲ ದುರಸ್ಥಿಗಳನ್ನೂ ಕೈಗೊಳ್ಳಲು ತಕ್ಷಣ ಸೂಕ್ತಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.