ಬೆಳ್ತಂಗಡಿ; ಬೆಸ್ಟ್ ಫೌಂಡೇಶನ್ ಸಂಸ್ಥೆಯ ವತಿಯಿಂದ ಬೆಳ್ತಂಗಡಿ ತಾಲೂಕಿನ ಇತಿಹಾಸದಲ್ಲೇ ಮೊದಲ ಬಾರಿಗೆ ಐಎಎಸ್, ಐಪಿಎಸ್, ಬ್ಯಾಂಕಿಂಗ್ ನಂತಹಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವತಯಾರಿ ತರಬೇತಿ ಸಂಸ್ಥೆಯನ್ನು ತೆರೆಯಲಾಗಿದ್ದು, ಇದರ ಉದ್ಘಾಟನೆ ಅ.20 ರಂದು ಬೆಳ್ತಂಗಡಿಯಲ್ಲಿ ನಡೆಯಲಿದೆ ಎಂದು ಹೈಕೋರ್ಟ್ ವಕೀಲರೂ ಆಗಿರುವ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು.
ಬೆಳ್ತಂಗಡಿ ಸರಕಾರಿ ನೌಕರರ ಸಂಘದ ಏಕತಾ ಭವನದಲ್ಲಿ ಸೋಮವಾರ ಕರೆಯಲಾಗಿದ್ದ ಮಾಧ್ಯಮ ಗೋಷ್ಟಿಯಲ್ಲಿ ಅವರು ವಿವರ ನೀಡಿದರು.
ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾಚಾಣಿ ಪತ್ರಿಕೆಗಳ ಸಹಕಾರದೊಂದಿಗೆ ಈ ತರಬೇತಿ ಆಯೋಜಿಸಲಾಗುತ್ತಿದೆ.
ಬುಧವಾರದಂದು ಅಪರಾಹ್ನ 1.30 ಕ್ಕೆ ಗುರುನಾರಾಯಣ ಸಂಕೀರ್ಣದ ಆಶಾ ಸಾಲಿಯಾನ್ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ವಿದ್ಯಾರ್ಥಿಗಳಿಗೆ ಸ್ವ ಪ್ರೇರಣೆಯಾಗಲಿ ಎಂಬ ದೃಷ್ಟಿಯಿಂದ ಮಂಗಳೂರು ಕಮಿಷನರೇಟ್ ನಲ್ಲಿ ಈಗಿನ ಪೊಲೀಸ್ ಕಮಿಷನರ್ ಆಗಿರುವ ಸರಳ ಸಜ್ಜನಿಕೆಯ ನಿಷ್ಠಾವಂತ ಅಧಿಕಾರಿ ಎನ್ ಶಶಿಕುಮಾರ್ ಐಪಿಎಸ್ ಅವರೇ ತರಬೇತಿ ಶಿಬಿರ ಉದ್ಘಾಟಿಸಲಿದ್ದಾರೆ. ಬಳಿಕ ಅವರು ವಿದ್ಯಾರ್ಥಿಗಳ ಜೊತೆ ಆಪ್ತ ಸಂವಾದ ನಡೆಸಲಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ರಕ್ಷಿತ್ ಶಿವರಾಂ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಸಂಸ್ಥೆಯ ಮಂಗಳೂರು ವಿಭಾಗದ ವ್ಯವಸ್ಥಾಪಕ ಪ್ರಕಾಶ್ ನಾಯಕ್, ಕುಂದಾಪುರದ ಡೈನಾಮಿಕ್ ಇನ್ಪೋಟೆಕ್ ಉದ್ಯಮಿಗಳಾದ ದಿನೇಶ್ ಅಮೀನ್ ಮತ್ತು ಧೀರಜ್ ಹೆಜಮಾಡಿ ಇವರು ಭಾಗವಹಿಸಲಿದ್ದಾರೆ ಎಂದರು.
ಈಗಾಗಲೇ ನಮ್ಮ ತರಬೇತಿಗೆ ಒಟ್ಟು ಮುನ್ನೂರು ಮಂದಿ ನೊಂದಾಯಿಸಿದ್ದಾರೆ. ಈಗಾಗಲೇ ನಾವು ಕೈಗೊಂಡಿರುವ ಯಕ್ಷಗಾನ ತರಬೇತಿಯಲ್ಲಿ 130 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಮುಂದಕ್ಕೆ ಬೆಳ್ತಂಗಡಿಯಲ್ಲಿ ಸಬ್ ಇನ್ಸ್ಪೆಕ್ಟರ್, ಪೊಲೀಸ್, ಬ್ಯಾಂಕಿಂಗ್ ಸಹಿತ ಇತರ ಸರಕಾರಿ ನೌಕರಿ ಪಡೆಯುವ ತರಬೇತಿಯನ್ನೂ ನಡೆಸಬೇಕೆಂದು ಇಚ್ಛೆ ಇದೆ.
ಮುಂದಕ್ಕೆ ಬೆಳ್ತಂಗಡಿಯಲ್ಲಿ ಐಎಎಸ್ ಐಪಿಎಸ್ ಅಧಿಕಾರಿಗಳನ್ನು ಖಂಡಿತಾ ತಯಾರಿಸುವ ಸಂಕಲ್ಪ ಮಾಡಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬೆಸ್ಟ್ ಫೌಂಡೇಶನ್ ಸಲಹೆಗಾರ ನಾಮದೇವ ರಾವ್ ಮುಂಡಾಜೆ, ಸದಸ್ಯರಾದ ಅಜಯ್ ಮಟ್ಲ, ಸಂತೋಷ್ ಕಾಂತಬೆಟ್ಟು ಉಪಸ್ಥಿತರಿದ್ದರು.