ಬೆಳ್ತಂಗಡಿ: ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ ಇಲ್ಲಿನ ಮೂರನೇ ಸೆಮಿಸ್ಟರ್ನ ತೋಟಗಾರಿಕಾ ವಿಭಾಗದ ವಿದ್ಯಾರ್ಥಿನಿ ಅಂಚಿತಾ ಧರಣೇಂದ್ರ ಜೈನ್ ಅವರು ದೆಯಲಿಯ ಕೆಂಪುಕೋಟೆಯಲ್ಲಿ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ಪೆರೇಡಿಗೆ ಆಯ್ಕೆಯಾಗಿದ್ದಾರೆ.
ಇವರು 2020-21 ನೇ ಸಾಲಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮೂಡಿಗೆರೆಯ ಪ್ರತಿನಿಧಿಯಾಗಿ ಕಾಲೇಜು ಹಂತದಲ್ಲಿ ಆಯ್ಕೆಗೊಂಡು ಬಳಿಕ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿದ್ವವಿದ್ಯಾಲಯದಲ್ಲಿ ನಡೆದ ಆಯ್ಕೆ ಸುತ್ತಿನಲ್ಲಿ ಮುಂದಿನ ಹಂತಕ್ಕೆ ತೇರ್ಗಡೆಗೊಂಡು, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಗಣರಾಜ್ಯೋತ್ಸವ ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗವಹಿಸಿ 32 ವಿದ್ಯಾರ್ಥಿಗಳಲ್ಲಿ ಓರ್ವರಾಗಿ ಆಯ್ಕೆಗೊಂಡಿದ್ದರು. ಬಳಿಕ ತಮಿಳುನಾಡಿನ ತಿರುಚಿರಾಪಳ್ಳಿಯ ನ್ಯಾಷನಲ್ ಕಾಲೇಜಿನಲ್ಲಿ ನಡೆದ 10 ದಿನಗಳ ದಕ್ಷಿಣ ವಲಯ ಪೂರ್ವ ಗಣರಾಜ್ಯೋತ್ಸವ ಶಿಬಿರದಲ್ಲಿ ಭಾಗವಹಿಸಿದ್ದು, ಒಟ್ಟು 7 ವಿದ್ಯಾರ್ಥಿಗಳ ಆಯ್ಕೆಯಾದವರಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನಿಯಾಗಿ ಅಂಚಿತಾ ದಾಖಲೆ ಬರೆದಿದ್ದಾರೆ.
ಈಗಾಗಲೇ ಅವರು ಒಂದು ತಿಂಗಳ ಕಾಲ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೂರ್ವಭಾವಿ ತರಬೇತಿಗಾಗಿ ತೆರಳಿದ್ದಾರೆ.
ಸಂಸ್ಥೆಯ ಡೀನ್ ಡಾ| ನಾರಾಯಣ ಎಸ್.ಮಾರ್ವಕರ್ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮ ಸಂಯೋಜನಾಧಿಕಾರಿ ಯೆಲ್ಲೇಶ್ ಕುಮಾರ್ ಎಚ್.ಎಸ್.ಅವರು ಅಂಚಿತಾ ಅವರಿಗೆ ತರಬೇತಿ ನೀಡಿ ಈ ಹಂತಕ್ಕೆ ತಂದು ನಿಲ್ಲಿಸಿದ್ದಾರೆ.
ಇವರು ಪೂಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಸೆಕೆಂಡರಿ ವಿಭಾಗದ ಸಹಶಿಕ್ಷಕ ಧರಣೆಂದ್ರ ಕೆ. ಹಾಗೂ ಅನುಪ ಕುಮಾರಿ ದಂಪತಿ ಪುತ್ರಿ.
ಅಂಚಿತಾ ಜೈನ್ ಅವರು ಸಹಪಠ್ಯ ಚಟುವಟಿಕೆಯಲ್ಲೂ ಕ್ರಿಯಾಶೀಲರಾಗಿದ್ದು ಯೂತ್ ಫೆಸ್ಟ್ ಸ್ಪರ್ಧೆಯಲ್ಲಿ ಮೂಡಿಗೆರೆ ವಿಶ್ವವಿದ್ಯಾಲಯದಿಂದ ರಾಷ್ಟ್ರಮಟ್ಟದವರೆಗೆ ಆಯ್ಕೆಯಾಗಿ ಅಂತಿಮ ಹಂತದಲ್ಲಿ ಛತ್ತೀಸ್ಗಡದಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಭರತನಾಟ್ಯ, ಡ್ರಾಯಿಂಗ್, ಕ್ರೀಡಾ ಸ್ಪರ್ಧೆಯಲ್ಲೂ ಸಾಧನೆ ಮಾಡಿದ್ದು, ಎನ್ಸಿಸಿ ಎ ಗ್ರೇಡಿಂಗ್ ಪಡೆದಿದ್ದಾರೆ.