ಬೆಳ್ತಂಗಡಿ; ಕೊಕ್ಕಡ ಬಳಿಯ ಕೌಕ್ರಾಡಿ ತುಕ್ರಪ್ಪವಶೆಟ್ಟಿ ಅವರ ಮನೆಯಲ್ಲಿ ನಡೆದಿರುವ ದ ರೋಡೆ ಪ್ರಕರಣಕ್ಕೂ ಜೈಪುರ ಮತ್ತು ಕಾರ್ಕಳದ ಮಾಳದಲ್ಲಿ ನಡೆದ ಘಟನೆಗಳಿಗೂ ಸಾಮ್ಯತೆಯಿದೆ. ಅದೇ ತಂಡ ಕೃತ್ಯ ಎಸಗಿರುವ ಶಂಕೆ ಇದೆ ಎಂದು ಜಿಲ್ಲಾ ಪೊಲೀಸ್ ಎಸ್.ಪಿ ಲಕ್ಷ್ಮೀ ಪ್ರಸಾದ್ ಐಪಿಎಸ್ ತಿಳಿಸಿದ್ದಾರೆ.
ಘಟನೆ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಈ ಬಗ್ಗೆ ವಿವರ ನೀಡಿದರು.
ಕೊಕ್ಕಡ ದರೋಡೆಯಲ್ಲಿ ಅಂದಾಜು 1.5 ಲಕ್ಷ ರೂ.ನಗದು, 400 ಗ್ರಾಂ ನಷ್ಟು ಚಿನ್ನಾಭರಣ ಅಪಹರಿಸಲಾಗಿದೆ. 6 ರಿಂದ 7 ಮಂದಿ ತಂಡದಲ್ಲಿದ್ದಿರಬಹುದು ಎಂದು ತುಕ್ರಪ್ಪ ಶೆಟ್ಟಿ ಅವರು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ತನಿಖೆ ಆರಂಭವಾಗಿದ್ದು ಆರೋಪಿಗಳನ್ನು ಪತ್ತೆಹಚ್ಚಲಾಗುವುದು ಎಂದರು.
ಹಲ್ಲೆಗೊಳಗಾದ ಮಹಿಳೆ ಪ್ರಾಣಾಪಾಯದಿಂದ ಪಾರು:
ದರೋಡೆಕೋರರ ಚೂರಿ ಇರಿತಕ್ಕೊಳಗಾಗಿರುವ ಮಹಿಳೆಗೆ ತೀವ್ರ ರಕ್ತಶ್ರಾವವಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ ಎಂದು ಎಸ್.ಪಿ ಹೇಳಿದರು.
ನಾಯಿ ಬೊಗಳಿದಾಗ ನೋಡಲು ಬಂದ ಮನೆಮಾಲಿಕನ ಮೇಲೆರಗಿದ ದರೋಡೆಕೋರರು;
ರಾತ್ರಿ ಜೋರಾಗಿ ನಾಯಿ ಬೊಗಳಲು ಪ್ರಾರಂಭಿಸಿದಾದ ನೋಡಲೆಂದು ಮೊದಲ ಮಹಡಿಯ ಬಾಗಿಲು ತೆರೆದು ಹೊರಬಂದ ಮನೆ ಮಾಲಿಕ ತುಕ್ರಪ್ಪ ಶೆಟ್ಟಿ ಅವರ ಮೇಲೆ ದರೋಡೆಕೋರರು ಎರಗಿದ್ದಾರೆ. ಜಟಾಪಟಿ ನಡೆಯುವ ಮಧ್ಯೆ ಅವರ ಪತ್ನಿ ರಕ್ಷಣೆಗಾಗಿ ಓಡಿ ಬಂದಿದ್ದು ಈ ವೇಳೆ ದರೋಡೆಕೋರರು ಅವರಿಗೆ ಚೂರಿಯಿಂದ ಇರಿದಿದ್ದಾರೆ. ಬಳಿಕ ಮನೆ ಮಾಲಿಕನ ಸಹಾಯದಿಂದ ಕಪಾಟುಗಳನ್ನೆಲ್ಲ ತೆರೆದು ಜಾಲಾಡಿ ಹಣ ಹಾಗೂ ಒಡವೆ ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಘಟನೆಯನ್ನು ಎಸ್.ಪಿ ವಿವರಿಸಿದರು.
ಒಂಟಿ ಮನೆಗಳಿಗೆ ಸಿಸಿ ಕ್ಯಾಮರಾ ಅಳವಡಿಸಿ; ಎಸ್.ಪಿ ಮನವಿ
ಇತ್ತೀಚಿಗಿನ ಕೆಲವು ಪ್ರಕರಣದಲ್ಲಿ ಪ್ರತ್ಯೇಕವಾಗಿರುವ ಮನೆಗಳೇ ಕಳ್ಳರ ಟಾರ್ಗೆಟ್ ಆಗಿರುವುದು ಸಾಬೀತಾಗುತ್ತಿದ್ದು ಆದ್ದರಿಂದ ಸಾಧ್ಯವಾದಷ್ಟು ಇಂತಹ ಮನೆಗಳಿಗೆ ಸಿ.ಸಿ ಕ್ಯಾಮರಾಗಳ ಭದ್ರತೆ ಮಾಡಿಕೊಳ್ಳುವಂತೆ ಸಾರ್ವಜನಿಕರಲ್ಲಿ ಎಸ್.ಪಿ ಮನವಿ ಮಾಡಿಕೊಂಡಿದ್ದಾರೆ. ಅನುಮಾನಾಸ್ಪದರು ಕಂಡುಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದಲ್ಲಿ ಉತ್ತಮ ಎಂದು ಅವರು ಈ ವೇಳೆ ಮಾದ್ಯಮದ ಮೂಲಕ ವಿನಂತಿಸುತ್ತೇನೆ ಎಂದರು.