ಬೆಳ್ತಂಗಡಿ; ಕೊಕ್ಕಡ ಗ್ರಾಮದ ಸೌತಡ್ಕ ದೇವಸ್ಥಾನಕ್ಕೆ ತೆರಳುವ ರಸ್ತೆ ಅಂಚಿನಲ್ಲಿರುವ ನೂಜೆ ತುಕ್ರಪ್ಪ ಶೆಟ್ಟಿ ಯವರ ಮನೆಗೆ ಸುಮಾರು ಒಂಭತ್ತು ಮಂದಿ ದರೋಡೆ ಕೋರರ ತಂಡವು ಸೋಮವಾರ ನಸುಕಿನ ಜಾವ ನುಗ್ಗಿ ಮನೆಯ ಯಜಮಾನ ಮತ್ತು ಅವರ ಪತ್ನಿ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ಮೌಲ್ಯದ ನಗನಗದು ದೋಚಿದ ಘಟನೆ ನಡೆದಿದೆ.
ಒಂಭತ್ತು ಮಂದಿ ಇದ್ದ ದರೋಡೆಕೋರರ ತಂಡ ಇವರನ್ನು ಕೂಡಿ ಹಾಕಿ ಹಲ್ಲೆ ನಡೆಸಿದ ಸಂದರ್ಭ ತುಕ್ರಪ್ಪ ಶೆಟ್ಟಿ ಯವರ ಪತ್ನಿಗೆ ಕತ್ತಿಯಿಂದ ಇರಿದ ತೀವ್ರ ಗಾಯಗಳಾಗಿದ್ದು ಇವರನ್ನ ಚಿಕಿತ್ಸೆಗಾಗಿ ಮಂಗಳೂರಿನ ಅಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮನೆಯಲ್ಲಿ ಪತಿ , ಪತ್ನಿ ಮತ್ತು ಇಬ್ಬರು ಸಣ್ಣ ಮಕ್ಕಳು ಮಾತ್ರ ಈ ಸಂದರ್ಭದಲ್ಲಿ ಇದ್ದುದರಿಂದ ಇವರನ್ನೆಲ್ಲ ಮಾರಕಾಸ್ತ್ರ ತೋರಿಸಿ ಬೆದರಿಸಿ ಕೂಡಿ ಹಾಕಿ ಈ ದರೋಡೆ ನಡೆಸಿದ್ದು ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಡಕಾಯಿತರ ತಂಡ ಬೆಳಗ್ಗಿನ ಜಾವ ಪರಾರಿಯಾಗಿದೆ. ಡಕಾಯಿತರು ತೆರಳುತ್ತಲೆ ಮನೆಯವರು ಉಪ್ಪಿನಂಗಡಿ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಕೂಡಲೆ ಪೊಲೀಸ್ ಅಧಿಕಾರಿಗಳು ಘಟನೆ ನಡೆದ ಮನೆಗೆ ಧಾವಿಸಿದ್ದಾರೆ.
ಸ್ಥಳೀಯವಾಗಿ ವಿಶ್ವಹಿಂದೂ ಪರಿಷತ್ ನ ಕೊಕ್ಕಡ ವಲಯ ಅಧ್ಯಕ್ಷರಾಗಿದ್ದ ನೂಜೆ ತುಕ್ರಪ್ಪ ಶೆಟ್ಟಿ ಯವರ ಮನೆಗೆ ಈ ದರೋಡೆ ಕೋರರು ನುಗ್ಗಿದ ವಿಷಯ ತಿಳಿಯುತ್ತಲೇ ನೂರಾರು ಮಂದಿ ಕುತೂಹಲದಿಂದ ಮನೆಯ ಕಡೆಗೆ ಆಗಮಿಸಿದ್ದಾರೆ.
ದರೋಡೆ ಕೋರರ ತಂಡದಲ್ಲಿ ಮನೆಯೊಳಗೆ ನುಗ್ಗಿದವರು ಅಂದಾಜು ಒಂಭತ್ತು ಮಂದಿಯಷ್ಟಿದ್ದು ದರೋಡೆ ನಡೆಸಿ ಪರಾರಿಯಾಗಬಹುದಾದ ಎಲ್ಲಾ ರಸ್ತೆಗಳನ್ನ ನಾಕಾಬಂದಿ ಹಾಕಿ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.