ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಶಿಬಿರ
ಬೆಳ್ತಂಗಡಿ; ಚಿತ್ರಕಥೆ, ನಿರ್ದೇಶನ ಮತ್ತು ಸಿನಿಮಾಟೋಗ್ರಾಫಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಮಂದಿಗೆ ಭಾಗವಹಿಸಲು ಅನುಕೂಲವಾಗುವಂತೆ ಮತ್ತು ತನ್ನೊಳಗಿನ ಕಥೆಗಳನ್ನು ಚಿತ್ರಕಥೆಯಾಗಿ ಪರಿವರ್ತಿಸುವ ಬಗ್ಗೆ ತಿಳಿಯಬಹುದಾದ ವಿಶೇಷ ಅವಕಾಶ ಇರುವ ಕಾರ್ಯಗಾರ ಉಜಿರೆ ಎಸ್ಡಿಎಂ ಪಿಜಿ ಕಾಲೇಜಿನಲ್ಲಿ ಅಕ್ಟೋಬರ್1 ರಿಂದ 12 ರ ವರೆಗೆ ನಡೆಯಲಿದೆ ಎಂದು ಸಾಂಸ್ಕೃತಿಕ ಸಂಘಟಕ, ನಿರ್ದೇಶಕ ಹಾಗೂ ನಿರ್ಮಾಪಕ ಸ್ಮಿತೇಶ್ ಎಸ್ ಬಾರ್ಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಶ್ರೀಗುರು ಮಿತ್ರಸಮೂಹ ಬೆಳ್ತಂಗಡಿ ಮತ್ತು ಬೋಧಿ ಪ್ರೊಡಕ್ಷನ್ ಇವರು ಪ್ರಮುಖ ಸಂಘಟಕರಾಗಿ ಈ ಕಾರ್ಯಾಗಾರ ಆಯೋಜಿಸಿದ್ದಾರೆ.
ಸುಮಾರು 100 ವರ್ಷಗಳ ಇತಿಹಾಸವಿರುವ ಭಾರತೀಯ ಚಿತ್ರರಂಗದಲ್ಲಿ ಹಲವು ಪ್ರತಿಭಾವಂತ ನಿರ್ದೇಶಕರು ತಮ್ಮ ವಿಶೇಷ ಕಥೆಗಳ ಮೂಲಕ ನಿರೂಪಣಾ ಶೈಲಿಯಿಂದ ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸಿನಿಮಾ ಒಂದು ರಂಗಿನ ಪ್ರಪಂಚ. ಎಲ್ಲರನ್ನೂ ಒಂದಲ್ಲ ಒಂದು ಬಾರಿ ತನ್ನೆಡೆಗೆ ಸೆಳೆಯುತ್ತದೆ. ಹಲವರ ಮನದೊಳಗೆ ಚಲನಚಿತ್ರ ಮಾಡಬಲ್ಲ ಕಥೆಗಳಿವೆ. ಆದರೆ ಅದನ್ನು ದೃಶ್ಯರೂಪಕ್ಕೆ ಇಳಿಸುವ ಬಗೆ ಕ್ಲಿಷ್ಟಕರವಾಗಿದೆ. ಇದನ್ನು ಮನಗಂಡು ಈ ಕಾರ್ಯಾಗಾರವನ್ನು ಕೈಗೆತ್ತಿಕೊಂಡಿದೆ.
ಎಸ್.ಡಿ.ಎಮ್.ಕಾಲೇಜ್ ಉಜಿರೆ ಡಿಪಾರ್ಟ್ಮೆಂಟ್ ಆಫ್ ಬಿ.ಮೋಕ್ ( ಡಿಜಿಟಲ್ ಮೀಡಿಯಾ ಮತ್ತು ಫಿಕ್ಸ್ ಮೇಕಿಂಗ್ ), ಇನ್ಸಿಟ್ಯೂಟ್ ಆಫ್ ಫಿಲ್ಸ್ ಆಂಡ್ ವಿಡಿಯೋ ಟೆಕ್ನಾಲಜಿ , ಪುಣೆ ಆದಿತ್ಯ ಕ್ರಿಯೇಟಿವ್ ಫಿಲ್ಸ್ ಮೇಕರ್ ಮುಂಬೈ ಇವರು ಸಹಯೋಗ ನೀಡುತ್ತಿದ್ದಾರೆ.
ಕಾರ್ಯಾಗಾರದಲ್ಲಿ ಕಥೆಯನ್ನು ಚಿತ್ರಕಥೆಯಾಗಿ ಪರಿವರ್ತಿಸುವ ಬಗೆ, ನಿರ್ದೇಶನ ಮಾಡುವ ವಿಧಾನ, ಕ್ಯಾಮರ ಕೈ ಚಳಕ ತೋರುವ ವಿಧಾನ, ಸಂಕಲನದ ಒಳಗುಟ್ಟು ಮತ್ತು ಸಿನಿಮಾ ಮಾರ್ಕೆಟಿಂಗ್ ಬಗ್ಗೆ ಕಲಿಯಬಹುದಾಗಿದೆ.
ಶಿಬಿರದಲ್ಲಿ 40 % ತರಗತಿ ಪಾಠಗಳು ನಡೆದರೆ, 60 % ಪ್ರಾಯೋಗಿಕ ತರಗತಿಗಳು ನಡೆಯುತ್ತದೆ. ಸಿನಿಮಾಕ್ಕೆ ಉಪಯೋಗಿಸುವ ಲೈಟ್ಗಳನ್ನು ಉಪಯೋಗಿಸಿ , ಬೆಳಗಿನ ವಿನ್ಯಾಸದ ತರಗತಿ, ಕ್ಯಾಮಾರವನ್ನು ಪ್ರತಿಯೊಬ್ಬರಿಗೂ ನೀಡಿ ಅದನ್ನು ಉಪಯೋಗಿಸುವ ಪ್ರಾಯೋಗಿಕ ಅಭ್ಯಾಸ ನೀಡಲಾಗುತ್ತದೆ. ಈ ಕಾರ್ಯಾಗಾರದಿಂದ ಗ್ರಾಮೀಣ ಪ್ರದೇಶದಲ್ಲಿರುವ ಕಲಿಯುವ ಮನಸ್ಸಿನ ಪ್ರತಿಯೊಬ್ಬರಿಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾಯೋಗಿಕ ತರಗತಿಗೆ ಒತ್ತು ನೀಡುತ್ತಿರುವುದರಿಂದ ಪೂರ್ಣಪ್ರಮಾಣದ ಕಲಿಕೆ ಸಾಧ್ಯ. ಕಾರ್ಯಗಾರದ ಬಳಿಕ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಲು ಅವಕಾಶವಿದೆ. ತಮ್ಮೊಳಗಿರುವ ಕಥೆಗಳನ್ನು ಚಿತ್ರಕಥೆಯಾಗಿ ಪರಿವರ್ತಿಸುವ ಬಗ್ಗೆ ಕೂಡ ತಿಳಿಯಬಹುದು. ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಚಿಸುವವರಿಗೆ ವಿದ್ಯಾರ್ಥಿಗಳಿಗೆ 3000 ರೂ., ಮತ್ತು ಇತರ ಆಸಕ್ತರಿಗೆ 4500 ರೂ. ಪ್ರವೇಶ ಶುಲ್ಕ ಇದೆ. ಇದರಲ್ಲಿ ಊಟದ ವ್ಯವಸ್ಥೆಯೂ ಒಳಗೊಂಡಿದೆ. ಕಾರ್ಯಾಗಾರ ಬೆಳಿಗ್ಗೆ 9 ರಿಂದ ಸಂಜೆ 4 ರ ವರೆಗೆ ನಡೆಯಲಿದೆ ಎಂದು ವಿವರ ನೀಡಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9901607312
ಪತ್ರಿಕಾಗೋಷ್ಠಿಯಲ್ಲಿ ರಮಾನಂದ ಸಾಲಿಯಾನ್ ಮತ್ತು ಕಲಾವಿದ ಅನೀಶ್ ಅಮೀನ್ ಉಪಸ್ಥಿತರಿದ್ದರು.