Posts

ಸಹಕಾರಿ ಕ್ಷೇತ್ರದ ಹಿರಿಯ ಧುರೀಣ ಎನ್.ಎಸ್ ಗೋಖಲೆ ಮುಂಡಾಜೆ ಇನ್ನಿಲ್ಲ

1 min read

ಬೆಳ್ತಂಗಡಿ; ಸಹಕಾರಿ ಕ್ಷೇತ್ರದ ಹಿರಿಯ ಧುರೀಣ, ಡಿಸಿಸಿ ಬ್ಯಾಂಕ್  ನಿವೃತ್ತ ಅಧಿಕಾರಿಯೂ ಆಗಿದ್ದ ಹಿರಿಯ ಮುತ್ಸದ್ದಿ ಎನ್.ಎಸ್ ಗೋಖಲೆ ಅವರು ಜೂ.30 ರಂದು ಬುಧವಾರ ರಾತ್ರಿ ನಿಧನರಾಗಿದ್ದಾರೆ.

ಮುಂಡಾಜೆ ಗ್ರಾಮದ ಮುಂಡ್ರುಪ್ಪಾಡಿ ವೇದಮೂರ್ತಿ ಸುಬ್ರಾಯ ಅನಂತ ಗೋಖಲೆ ಅವರ ಪುತ್ರರಾಗಿ ಜನಿಸಿದ್ದ ಅವರು ಬಳಿಕ ಕಲ್ಲಹಿತ್ಲು ಎಂಬಲ್ಲಿ ಕೃಷಿ‌ಕ್ಷೇತ್ರ ಮತ್ತು ಮನೆ ಹೊಂದಿದ್ದರು. ಪ್ರಸ್ತುತ ಗ್ರಾಮದ ಕೂಳೂರು ಎಂಬಲ್ಲಿ ನೆಲೆಸಿದ್ದರು.

ಮೂಲತಃ ಕೃಷಿಕರು. ಜೊತೆಗೆ ಸಾಮಾಜಿಕ - ಧಾರ್ಮಿಕ ಕ್ಷೇತ್ರದಲ್ಲಿ ಅಪ್ರತಿಮವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಎನ್.ಎಸ್ ಗೋಖಲೆ ಅವರು ಇಳಿವಯಸ್ಸಿನಲ್ಲೂ ಸ್ಪೂರ್ತಿದಾಯಕ ಚಟುವಟಿಕೆಯಲ್ಲಿ ಇದ್ದರು. ಮುಂಡಾಜೆ ಶ್ರೀ ಪರಶುರಾಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರೂ ಆಗಿ ಕ್ರಿಯಾಶೀಲ ಸೇವೆ ಸಲ್ಲಿಸಿದ್ದರು. ಶತಮಾನೋತ್ಸವ ಸಂಭ್ರಮ ಆಚರಿಸಿದ್ದ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಹಿಂದೆ ಅಧ್ಯಕ್ಷರೂ ಆಗಿದ್ದ ಅವರು ಅಭಿವೃದ್ದಿಯ ಮಹಾಕನಸು ಕಂಡಿದ್ದರು. ಅವರ ಆಲೋಚನಾ ಕ್ರಿಯಾಶಕ್ತಿಯ ಫಲವಾಗಿ ಸೋಮಂತಡ್ಕ ಪೇಟೆಯಲ್ಲಿ ಸಹಕಾರಿ ಸಂಘದ ಶತಮಾನೋತ್ಸವ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಿತ್ತು.

ಅದರ ಉದ್ಘಾಟನೆಯ ವೇಳೆ ಅವರು ಆಡಳಿತ ಮಂಡಳಿಯಲ್ಲಿ ಇಲ್ಲದೇ ಇದ್ದರೂ ಈಗಿನ ಮಂಡಳಿಯವರ ಜೊತೆ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಈ ಸಂದರ್ಭ ಅವರು ಜಿಲ್ಲೆಯ ಸಹಕಾರಿ ಸಂಘಗಳ ಮಾಹಿತಿ ಕೈಪಿಡಿ ರಚಿಸಿ ಬಿಡುಗಡೆಗೊಳಿಸಿದ್ದರು. ಸಮಾರಂಭದಲ್ಲಿ ಅವರನ್ನು ಸಹಕಾರಿ ಬಂಧುಗಳ ಪರವಾಗಿ ಡಾ. ಎಂ.ಎನ್ ರಾಜೇಂದ್ರ ಕುಮಾರ್  ಸನ್ಮಾನಿಸಿದ್ದರು.

ಸಹಕಾರಿ ಕ್ಷೇತ್ರದಲ್ಲಿ ದೀರ್ಘ ಮತ್ತು ಆಳವಾದ ಅನುಭವ ಹೊಂದಿದ್ದ ಅವರು ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್, ಮಾಸ್ ಲಿಮಿಟೆಡ್, ಟಿಎಪಿಸಿಎಂಎಸ್, ಕ್ಯಾಂಪ್ಕೋ ಸಹಿತ ವಿವಿಧ ಸಂಸ್ಥೆಗಳಲ್ಲಿ ಹೆಜ್ಜೆ ಗುರುತು ಮೂಡಿಸಿದ್ದರು.

ಕೃಷಿಕರನ್ನು ಋಣಮುಕ್ತರನ್ನಾಗಿಸುವ ದೂರದೃಷ್ಟಿಯ ಯೋಜನೆ ಪರಿಕಲ್ಪಿಸಿದ್ದ ಅವರು ತಾನು ಮುಂಡಾಜೆ ಸಹಕಾರಿ ಸಂಸ್ಥೆಯ ಅಧ್ಯಕ್ಷರಾಗಿದ್ದಾಗ ಪ್ರತ್ಯೇಕ ನಿಧಿ ಸ್ಥಾಪಿಸಿದ್ದರು. ಸಾಲ ತೀರುವಳಿ ಯೋಜನೆ ಎಂಬ ಅವರ ಆಲೋಚನೆಗೆ  ಕೇಂದ್ರ ಮತ್ತು ರಾಜ್ಯ ಸರಕಾರದಿಂದಲೇ ಬಜೆಟ್ ಮೂಲಕ  ನಿಧಿ ದೊರೆಯುವಂತೆ ಮಾಡಲು ಅನೇಕ ಪ್ರಯತ್ನಗಳನ್ನು ಮಾಡಿದ್ದರು.

ಅಪೂರ್ವ ಸಂಘಟಕರೂ ಆಗಿದ್ದ ಎನ್.ಎಸ್ ಗೋಖಲೆ ಅವರು ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲೂ ಗುರುತಿಸಿಕೊಂಡು ಉತ್ತಮ ಅರ್ಥದಾರಿಯಾಗಿಯೂ ಪಾತ್ರ ನಿರ್ವಹಿಸುತ್ತಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

3 comments

  1. second ago
    ಎಲ್ಲರಲ್ಲೂ ಆತ್ಮೀಯತೆಯ ಭಾವದಿಂದ ಸ್ಪಂದಿಸುತ್ತಿದ್ದ ಎನ್.ಎಸ್. ಗೋಖಲೆಯವರು ಮನುಷ್ಯಪ್ರೀತಿಗೆ ಒಬ್ಬ ಮಾದರಿ ವ್ಯಕ್ತಿಯಾಗಿದ್ದರು. ನಮ್ಮ ಶಿಕ್ಷಣ ಸಂಸ್ಥೆಯ ವತಿಯಿಂದ ಅವರಿಗೆ ಸ್ನೇಹ ಪ್ರಶಸ್ತಿ ನೀಡಿ ಗೌರವಿಸಿದ್ದೆವು. ಅವರ ನಿಧನ ನಮ್ಮ ಸಮಾಜದ ನಷ್ಟ. ಆದರೆ ಅವರ ಕೊಡುಗೆಗಳು ಚಿರಸ್ಮರಣೀಯ. ಅವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥನೆ.
  2. second ago
    ಎಲ್ಲರಲ್ಲೂ ಆತ್ಮೀಯತೆಯ ಭಾವದಿಂದ ಸ್ಪಂದಿಸುತ್ತಿದ್ದ ಎನ್.ಎಸ್. ಗೋಖಲೆಯವರು ಮನುಷ್ಯಪ್ರೀತಿಗೆ ಒಬ್ಬ ಮಾದರಿ ವ್ಯಕ್ತಿಯಾಗಿದ್ದರು. ನಮ್ಮ ಶಿಕ್ಷಣ ಸಂಸ್ಥೆಯ ವತಿಯಿಂದ ಅವರಿಗೆ ಸ್ನೇಹ ಪ್ರಶಸ್ತಿ ನೀಡಿ ಗೌರವಿಸಿದ್ದೆವು. ಅವರ ನಿಧನ ನಮ್ಮ ಸಮಾಜದ ನಷ್ಟ. ಆದರೆ ಅವರ ಕೊಡುಗೆಗಳು ಚಿರಸ್ಮರಣೀಯ. ಅವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥನೆ.
    ಚಂದ್ರಶೇಖರ ದಾಮ್ಲೆ, ಸುಳ್ಯ
  3. second ago
    Om shanti 🙏🙏