ಬೆಳ್ತಂಗಡಿ; ತಾಲೂಕಿನಲ್ಲಿ 110 ಜುಮ್ಮಾ ಮಸ್ಜಿದ್ ಗಳು ಮತ್ತು 150 ಮದರಸಗಳು ಕಾರ್ಯಾಚರಿಸುತ್ತಿದ್ದು, ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹೊರ ಜಿಲ್ಲೆಗಳಿಂದ ಅಥವಾ ಹೊರ ರಾಜ್ಯಗಳಿಂದ ಬರುವಂತಹಾ ಆಯಾ ಪ್ರದೇಶದ ಜುಮ್ಮಾ ಮಸ್ಜಿದ್ ಗೊಳಪಟ್ಟ ಸೋಂಕಿತರನ್ನು ಕ್ವಾರಂಟೈನ್ ವ್ಯವಸ್ಥೆಗೊಳಿಸಲು ತಾಲೂಕಿನ ಆಯ್ದ ಮದರಸ ಕೇಂದ್ರಗಳನ್ನು ಕೋವಿಡ್ ಕೇರ್ ಸೆಂಟರ್ ತೆರೆಯುವ ಉದ್ದೇಶದಿಂದ ಬಿಟ್ಟುಕೊಡಲು ಸಿದ್ಧ ಎಂದು ಬೆಳ್ತಂಗಡಿ ತಾಲೂಕು ಸುನ್ನೀ ಮಸೀದಿ ಮತ್ತು ಮದರಸಗಳ ಫೆಡರೇಶನ್ ವತಿಯಿಂದ ಶುಕ್ರವಾರ ತಹಶಿಲ್ದಾರರ ಮೂಲಕ ಆಡಳಿತಕ್ಕೆ ಮಾಹಿತಿ ಪತ್ರ ನೀಡಲಾಯಿತು.
ತಾಲೂಕಿನ ಒಟ್ಟು 12 ಮದರಸ ಸಭಾಂಗಣ, ಒಂದು ಶಾದಿ ಮಹಲ್, ಮೂರು ಶಿಕ್ಷಣ ಸಂಸ್ಥಗಳಲ್ಲಿ ಯಾವುದನ್ನು ಬೇಕಾದರೂ ಸರಕಾರ ಆದ್ಯತೆಯ ನೆಲೆಯಲ್ಲಿ ವ್ಯವಸ್ಥೆ ರೂಪಿಸಲು ಬಳಸಿಕೊಳ್ಳಬಹುದು ಎಂದು ತಿಳಿಯಪಡಿಸಲಾಯಿತು.
ಮದರಸ ಕಟ್ಟಡಗಳಾದ ಬೆಳ್ತಂಗಡಿ ಖಿಲ್ರ್ ಜುಮಾ ಮಸ್ಜಿದ್ ಮದರಸ ಕಟ್ಟಡ, ಕಾಜೂರು, ಉಜಿರೆ ಹಳೆಪೇಟೆ, ಕಕ್ಕಿಂಜೆ, ಪೆರೊಡಿತ್ತಾಯಕಟ್ಟೆ, ವೇಣೂರು, ಮಡಂತ್ಯಾರು, ಸರಳಿಕಟ್ಟೆ, ಕರಾಯ, ಬಂಗೇರಕಟ್ಟೆ, ಕುಂಡದಬೆಟ್ಟು ಮತ್ತು ಕೊಕ್ಕಡ ಇಲ್ಲಿನ ಮದರಸ ಕಟ್ಟಡಗಳು, ಗೇರುಕಟ್ಟೆ ಮನ್ಶರ್ ವಿದ್ಯಾ ಸಂಸ್ಥೆ, ತೆಕ್ಕಾರು ಗ್ರಾಮದ ಮೂಡಡ್ಕ ಅಲ್ ಮದೀನತುಲ್ ಮುನವ್ವರ ಶಿಕ್ಷಣ ಸಂಸ್ಥೆ ಮತ್ತು ಅನುಗ್ರಹ ಎಜುಕೇಶನ್ ಟ್ರಸ್ಟ್ ಬೆಳ್ತಂಗಡಿ ಬಸ್ ನಿಲ್ದಾಣ ಮುಂಭಾಗದ ಕಾಲೇಜು ಕಟ್ಟಡ ಹಾಗೂ ಗುರುವಾಯನಕೆರೆ ಮಸ್ಜಿದ್ ನ ಶಾದಿ ಮಹಲ್ ಕಟ್ಟಡದಲ್ಲಿ ಅನುವು ಮಾಡಿಕೊಡುವುದಾಗಿ ತಿಳಿಯಪಡಿಸಲಾಗಿದೆ. ಜಿಲ್ಲಾಧಿಕರಿಯವರಿಗೆ ಹಾಗೂ ಮುಖ್ಯಮಂತ್ರಿಗಳಿಗೂ ಸದ್ರಿ ಪತ್ರವನ್ನು ಈಮೈಲ್ ಮೂಲಕ ಕಳುಹಿಸಿಕೊಡಲಾಯ್ತು.
ತಹಶಿಲ್ದಾರರ ಭೇಟಿ ವೇಳೆ ಬಿ. ಎಂ ಹಮೀದ್ ಹಾಜಿ ಉಜಿರೆ, ಅಬ್ಬೋನು ಮದ್ದಡ್ಕ, ರಝಾಕ್ ಕನ್ನಡಿಕಟ್ಟೆ, ನವಾಝ್ ಶರೀಫ್ ಕಟ್ಟೆ, ಹಾಗೂ ಎಂ. ಜಿ ತಲ್ಹತ್ ಸವಣಾಲು ಮತ್ತು ಸಾಲಿ ಮದ್ದಡ್ಕ ಇವರು ಉಪಸ್ಥಿತರಿದ್ದರು.